ಕುಶಾಲನಗರ,ಏ 04 : ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆಯ ಸದಸ್ಯರೂ ಆಗಿದ್ದ ಅಬ್ದುಲ್ ಖಾದರ್ ಅವರ ನಿಧನಾರ್ಥ ಕುಶಾಲನಗರ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ ಶುಕ್ರವಾರ ಸಂಜೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಈ ಸಂದರ್ಭ ಮಾತನಾಡಿ, ಕುಶಾಲನಗರ ಪಟ್ಟಣದ ಇಂಚಿಂಚು ವಿಚಾರಗಳನ್ನು ಅರಿತಿದ್ದ ಪಕ್ಷದ ಕಟ್ಟಾಳು ತುಂಬು ಕುಟುಂಬದ ಹಿನ್ನೆಲೆಯಿಂದ ಬಂದರೂ ಕೂಡ ಬೆಳೆದದ್ದು ಏಕಾಂಗಿಯಾಗಿ.
ತಳ ಮಟ್ಟದ ಕಾರ್ಯಕರ್ತರಿಂದ ಉನ್ನತ ನಾಯಕರ ವರೆಗೂ ಅವಿನಾಭಾವ ಸಂಬಂಧ ಹೊಂದಿದ್ದ ಖಾದರ್ ಎಂತಹ ಬಡವ ಬಲ್ಲಿದನ ನೋವುಗಳಿಗೂ ಸ್ಪಂದಿಸುತ್ತಿದ್ದ ಮನೋಭಾವ ಅವರದ್ದಾಗಿತ್ತು.
ಎಲ್ಲಾ ಜಾತಿ ಧರ್ಮೀಯರನ್ನು ಸ್ನೇಹ ಭಾವದಿಂದ ಕಾಣುತ್ತಿದ್ದ ಉತ್ತಮ ವ್ಯಕ್ತಿತ್ವವುಳ್ಳ ಭರವಸೆಯ ನಾಯಕನಾಗಿದ್ದ.
ಅಲ್ಪಸಂಖ್ಯಾತ ನಾದರೂ ಕೂಡ ಎಲ್ಲಾ ಧರ್ಮೀಯರ ವಿಶ್ವಾಸ ಗಳಿಸಿದ್ದ ಹೃದಯವಂತ ಎಂದು ಶಶಿಧರ್ ನುಡಿನಮನ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಟಿ.ಪಿ.ಹಮೀದ್ ಮಾತನಾಡಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ರಾಜಕೀಯದ ದಿನಗಳಲ್ಲಿ ಖಾದರ್ ವಹಿಸುತ್ತಿದ್ದ ಪಾತ್ರದ ಕುರಿತು ಸ್ಮರಿಸಿದರು.
ಕುಶಾಲನಗರ ಪಟ್ಟಣದಲ್ಲಿ ಅಜಾತಶತ್ರುವಾಗಿದ್ದ ಖಾದರ್ ನಿಧನ ಊರಿಗೆ ಆದ ನಷ್ಟ ಎಂದರು.
ಪಕ್ಷದ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ಪಕ್ಷದ ಕಾರ್ಯಕರ್ತರ ನೋವು ನಲಿವುಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿದ್ದ, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದವರು ಖಾದರ್ ಅಗಲಿಕೆ ಪಕ್ಷಕ್ಕೆ ನಷ್ಟವಾಗಿದೆ ಎಂದರು.
ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಖಾದರ್ ಅವರು ಪುರಸಭಾ ಸದಸ್ಯರಾಗಿ ಕುಶಾಲನಗರದ ಅಭಿವೃದ್ದಿಗೆ ಸಾಕಷ್ಟು ಶ್ರಮ ವಹಿಸಿದ್ದವರು ಎಂದರು.
ಕುಶಾಲನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಡಿ.ಚಂದ್ರು ಮಾತನಾಡಿ, ರಾಜಕೀಯವಾಗಿ ಬಹಳಷ್ಟು ಮಂದಿ ಯುವಕರಿಗೆ ಮಾರ್ಗದರ್ಶಿಯಾಗಿದ್ದ ಖಾದರ್ ಅವರ ಅಕಾಲಿಕ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಅವರು ಖಾದರ್ ಅವರಿಗೆ ನುಡಿನಮನ ಸಲ್ಲಿಸುತ್ತಲೇ ಅವರ ಪಕ್ಷದ ಮೇಲಿನ ಶಿಸ್ತು ಹಾಗೂ ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದುದನ್ನು ವಿವರಿಸುತ್ತಾ ಕಣ್ಣೀರಾದರು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಸದಸ್ಯರಾದ ವಿ.ಎಸ್.ಆನಂದಕುಮಾರ್, ನವೀನ್, ಜಯಲಕ್ಷ್ಮಿ, ಜಿ.ಬಿ. ಜಗದೀಶ್, ಶಿವಶಂಕರ್, ಪ್ರಕಾಶ್,
ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಪಕ್ಷದ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,
ಪಕ್ಷದ ಪ್ರಮುಖರಾದ ಎಂ.ನಂಜುಂಡಸ್ವಾಮಿ, ಎಸ್.ಎನ್.ರಾಜೇಂದ್ರ, ಹೆಬ್ಬಾಲೆ ರಾಜಶೇಖರ್, ದಾಮೋದರ್, ಪಾರ್ವತಿ, ಟಿಲ್ಲು ಮೊದಲಾದವರಿದ್ದರು.
Back to top button
error: Content is protected !!