ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಶಿಬಿರದಲ್ಲಿ ಗೌರಿ ಗಣೇಶೋತ್ಸವ ಆಚರಣೆ ನಡೆಯಿತು.
ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ಆಶ್ರಯದಲ್ಲಿ ಮಂಗಳವಾರ ಗಣಪತಿ ಪ್ರತಿಷ್ಠಾಪನೆ ನಡೆಸಲಾಯಿತು.
ಮಾಜಿ ಸಚಿವ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪೂಜೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ವಿಘ್ನ ನಿವಾರಕ ಗಣಪತಿ ಆರಾಧನೆ ಎಲ್ಲರಿಗೂ ಮಂಗಳ ಉಂಟುಮಾಡುತ್ತದೆ. ದೇವರ ನಂಬಿಕೆಯೊಂದಿಗೆ ಗುರು ಹಿರಿಯರ ಆಶೀರ್ವಾದ ಕೂಡ ಯಶಸ್ಸಿಗೆ ಕಾರಣವಾಗುತ್ತದೆ. ಸನಾತನ ಧರ್ಮ ಪರಿಪಾಲನೆ ಅಗತ್ಯವಿದೆ. ವಿವಿಧ ದೇಶಗಳಲ್ಲಿ ಕೂಡ ಗಣಪತಿ ಆರಾಧನೆ ಮಾಡುವುದು ಕಾಣಬಹುದು ಎಂದರು.
ಶಿಬಿರದ ನಿವಾಸಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕಿದೆ. ಮತಾಂತರ ಆಮೀಷಕ್ಕೆ ಒಳಗಾಗದೆ ಧರ್ಮ ರಕ್ಷಣೆಗೆ ಒತ್ತು ನೀಡುವಂತಾಗಬೇಕೆಂದರು.
ಧರ್ಮ ಜಾಗರಣ ವೇದಿಕೆ ಪ್ರಮುಖ ಭರತ್ ಮಾಚಯ್ಯ ಮಾತನಾಡಿದರು.
ಇದೇ ಸಂದರ್ಭ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೂಡಿಗೆ ಗ್ರಾಪಂ ಅಧ್ಯಕ್ಷ ಗಿರೀಶ್, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣ, ವನವಾಸಿ ಕಲ್ಯಾಣ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಣ್ಣ, ಕಾರ್ಯದರ್ಶಿ ಎಂ.ಹರ್ಷ, ಖಜಾಂಚಿ ಅನೀಶ್, ಆರ್.ಎಸ್.ಎಸ್.ಸಹ ಕಾರ್ಯವಾಹಕ ರಮೇಶ್ ಬೊಟ್ಟುಮನೆ, ತಾಲೂಕು ಸೇವಾ ಪ್ರಮುಖ ಮುರಳೀಧರ್, ಹಿಂಜಾವೇ ಯ ರಾಜೀವ್, ಪ್ರವೀಣ್, ಪ್ರದೀಪ್, ಶಿಬಿರದ ನಿವಾಸಿಗಳಾದ ರವಿ, ಸಿದ್ದ ಮಂಜೇಶ್, ಸುಬ್ರಮಣಿ ಇದ್ದರು.
ಇದೇ ಸಂದರ್ಭ ಹಾಡಿಯ ಸಮಸ್ಯೆಗಳ ಬಗ್ಗೆ ನಿವಾಸಿಗಳು ಮಾಜಿ ಶಾಸಕರು ಹಾಗೂ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತಂದು ಪರಿಹಾರಕ್ಕೆ ಆಗ್ರಹಿಸಿದರು.
Back to top button
error: Content is protected !!