ಕೂಡಿಗೆ, ಫೆ. 24: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕುಶಾಲನಗರ ಪುರಸಭೆಯ ವತಿಯಿಂದ ಆರಂಭಿಸಲು ಉದ್ದೇಶಿಸಿದ ಬೀದಿ ನಾಯಿಗಳ ಶಸ್ತ್ರಚಿಕಿತ್ಸಾ ಕೇಂದ್ರಕ್ಕೆ ಭುವನಗಿರಿ, ಸೀಗೆಹೊಸೂರು ಜೇನುಕಲ್ಲು ಬೆಟ್ಟ ವ್ಯಾಪ್ತಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಎರಡು ದಿನಗಳ ನಂತರ ಅವುಗಳು ಇದ್ದ ಜಾಗದಲ್ಲಿ ಬಿಡುವ ವ್ಯವಸ್ಥೆ ಅಡಿಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಕಸ ವಿಲೇವಾರಿ ಘಟಕದ ಸಮೀಪದಲ್ಲಿರುವ ವಿಶಾಲವಾದ ಕಟ್ಟಡದಲ್ಲಿ ಶಸ್ತ್ರಚಿಕಿತ್ಸಾ ಘಟಕ ಆರಂಭಕ್ಕೆ ಮುಂದಾದಾಗ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕ್ಕೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮತ್ತು ಅಧಿಕಾರಿ ವರ್ಗದವರು ಅಗಮಿಸಿ ಸಂದರ್ಭದಲ್ಲಿ ಗ್ರಾಮಸ್ಥರು ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಕಸ ವಿಲೇವಾರಿ ಘಟಕದಿಂದ ತೀವ್ರ ಅನಾನುಕೂಲ ಎದುರಾಗಿದೆ. ಇದರೊಂದಿಗೆ ಬೀದಿ ನಾಯಿ ಶಸ್ತ್ರಚಿಕಿತ್ಸೆ ಕೇಂದ್ರವನ್ನು ಆರಂಭಿಸಿದರೆ ಸಮೀಪದಲ್ಲಿರುವ ಕಾಡು ಪ್ರಾಣಿಗಳು ಗ್ರಾಮದೊಳಗೆ ಬರಲು ಅನುಕೂಲವಾಗುತ್ತದೆ. ಇದರಿಂದಾಗಿ ಅನಾಹುತ ಸಂಭವಿಸುವ ಕಾರಣ ಯೋಜನೆ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶಾಸಕರು ಬದಲಿ ಜಾಗ ಗುರುತಿಸಲು ನೀಡಿದ ಸೂಚನೆ ಅನ್ವಯ ಕ್ರಮಕ್ಕೆ ಮುಖ್ಯಾಧಿಕಾರಿ ಮುಂದಾಗಿದ್ದಾರೆ.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ, ಚಂದ್ರ, ಗ್ರಾಮದ ಪ್ರಮುಖರಾದ ಪುಟ್ಟೇಗೌಡ, ಗೌರಮ್ಮ, ಕುಮಾರ, ರಮೇಶ, ಸಣ್ಣಸ್ವಾಮಿ,ನಾಗರಾಜ್, ಲೋಹಿತ್,ದೊಡ್ಡಯ್ಯ,ದಶರಥ, ಭುವನಗಿರಿ ರಮೇಶ್ ಮತ್ತಿತರರು ಹಾಜರಿದ್ದರು.
Back to top button
error: Content is protected !!