ಕುಶಾಲನಗರ, ಫೆ 20: ಕಣಿವೆ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕಲಿಕೋತ್ಸವ ಕಾರ್ಯಕ್ರಮ ಗುರುವಾರ ಸಡಗರ ಸಂಭ್ರಮಗಳಿಂದ ನೆರವೇರಿತು.
ಕಲಿಕೋತ್ಸವದಲ್ಲಿ ಪಾಲ್ಗೊಳ್ಳಲು ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಸಂಬಂಧಿಸಿದ ಶಾಲೆಗಳ ಶಿಕ್ಷಕರು ಸಡಗರ ಸಂಭ್ರಮಗಳಿಂದ ಕಲಿಕೋತ್ಸವದಲ್ಲಿ ಭಾಗಿಯಾದರು.
ಮಕ್ಕಳಿಗಾಗಿ ಕಲಿಕೋತ್ಸವದಲ್ಲಿ ಉತ್ತಮ ಕೈ ಬರಹ, ಸಂತೋಷದಾಯಕ ಗಣಿತ, ಗಟ್ಟಿ ಓದು, ಕಥೆ ಕಟ್ಟುವುದು, ಮೆಮೋರಿ ಪರೀಕ್ಷೆ, ರಸಪ್ರಶ್ನೆ, ಪೋಷಕರ ಮತ್ತು ಮಕ್ಕಳ ಸಹ ಸಂಬಂಧ ಆಟ ಮೊದಲಾದ ಚಟುವಟಿಕೆಗಳು ನಡೆದವು.
ತೀರ್ಪುಗಾರರಾಗಿ ವಿವಿಧ ಶಾಲೆಗಳ ಶಿಕ್ಷಕರಾದ ಹುಲುಸೆ ಬಸವರಾಜು, ನಾಗರಾಜು, ಮಹದೇವ ಕುಮಾರ್, ಸುಂದರ್, ಉದಯಪ್ರಕಾಶ್, ನಳಿನಿ, ದೀಪಿಕಾ ಕಾರ್ಯನಿರ್ವಹಿಸಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಮುಚ್ಚುವ ಹಂತದಲ್ಲಿನ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಹಾಗೆ ದಾಖಲಾಗುವ ಮಕ್ಕಳಿಗೆ ಗುಣಮಟ್ಟಣ ಶಿಕ್ಷಣವನ್ನು ನೀಡುವ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳ ಕಲಿಕೆಯನ್ನು ದೃಢೀಕರಿಸುವ ಚಟುವಟಿಕೆ ಇದಾಗಿದೆ ಎಂದು ಕೂಡಿಗೆ ಡಯಟ್ ನ ಹಿರಿಯ ಉಪನ್ಯಾಸಕ ಹೇಮಂತ್ ರಾಜ್ ಹೇಳಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಶಾಲಾ ಶಿಕ್ಷಕರ ಪರಿಶ್ರಮ ಶ್ಲಾಘನೀಯ.
ಖಾಸಗಿ ಶಾಲೆಗಳ ಆರ್ಭಟದಿಂದಾಗಿ ಸರ್ಕಾರಿ ಶಾಲೆಗಳು ಅಧೋಗತಿಯತ್ತ ಸಾಗಿದ್ದು ಮಕ್ಕಳನ್ನು ಶಾಲೆಗಳಿಗೆ ಸೆಳೆಯಲು ಇಲಾಖೆ ಏನೆಲ್ಲಾ ಕಸರತ್ತು ನಡೆಸುತ್ತಿದೆ. ಗ್ರಾಮಗಳ ಅಸ್ಮಿತೆಯಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು ಮುಂದಾಗಬೇಕು ಎಂದು ಕಾರ್ಯಕ್ರಮದ ಅತಿಥಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿದರು.
ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ, ಪಿಡಿಒ ಮೋಹನ್, ಕಾರ್ಯದರ್ಶಿ ಸುರೇಶ್, ಕ್ಲಸ್ಟರ್ ಸಂಪನ್ಮೂಲ ಶಿಕ್ಷಕ ಆದರ್ಶ, ಹಳಗೋಟೆ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಕಣಿವೆ ಶಾಲೆಯ ಕಸ್ತೂರಿ, ಮಣಜೂರು ಶಾಲೆಯ ರಾಣಿ, ಜೇನುಕಲ್ಲು ಬೆಟ್ಟ ಶಾಲೆಯ ರಾಮೇಗೌಡ, ಹೆಬ್ಬಾಲೆಯ ವೆಂಕಟೇಶ್,ನಲ್ಲೂರು ಶಾಲೆಯ ಚಂದ್ರಶೇಖರ್, ಶಿರಂಗಾಲ ಶಾಲೆಯ ವಸಂತ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿರೂಪಾಕ್ಷ, ಸದಸ್ಯೆ ಪವಿತ್ರಾ ಇದ್ದರು.
Back to top button
error: Content is protected !!