ಕುಶಾಲನಗರ, ಅ 11: ಮಾಜಿ ಸೈನಿಕರ ಸಂಘಗಳ ಒಕ್ಕೂಟಕ್ಕೆ ಸೇರ್ಪಡೆಯಾಗಲು ಕುಶಾಲನಗರದ ಮಾಜಿ ಸೈನಿಕರ ಸಂಘ ಇಚ್ಚಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ನಿವೃತ್ತ ಕ್ಯಾ.ಡಿ.ಕೆ.ಚಿಣ್ಣಪ್ಪ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಮಾಜಿ ಸೈನಿಕರ ಸಂಘಗಳ ಒಕ್ಕೂಟ ರಚನೆ ಬಗ್ಗೆ ನಡೆದ ಸಭೆಯಲ್ಲಿ ಎಲ್ಲಾ ಸಂಘಗಳು ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ನಮ್ಮ ಕುಶಾಲನಗರ ಸಂಘ ಸ್ವತಂತ್ರ ಸಂಘವಾಗಿದ್ದು ಒಕ್ಕೂಟಕ್ಕೆ ಸೇರ್ಪಡೆಯಾಗಲು ಯಾವುದೇ ರೀತಿಯ ಸಮ್ಮತಿ ಸೂಚಿಸಿಲ್ಲ, ಒಕ್ಕೂಟಕ್ಕೆ ಸೇರ್ಪಡೆಯಾಗುವ ಇಚ್ಚೆಯೂ ಇಲ್ಲ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಕುಶಾಲನಗರ ಸಂಘ ತನ್ನ ಬೆಳ್ಳಿಹಬ್ಬ ಆಚರಿಸಿದೆ. ಸಂಘದ ಮೂಲಕ ಮಾಜಿ ಸೈನಿಕರ ಸಮಸ್ಯೆಗಳಿಗೆ ಹೋರಾಡಲು ಸಂಘ ಸದಾ ಸಿದ್ದವಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಮನು ನಂಜುಂಡ ಮಾತನಾಡಿ, ನಮ್ಮ ಜೊತೆ ಚರ್ಚಿಸದೆ ಒಕ್ಕೂಟ ರಚನೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಮಾಜಿ ಸೈನಿಕರ ಸಂಘವಿದೆ. ಅವರ ಸಹಕಾರ ಕೂಡ ನಮ್ಮ ಸಂಘಕ್ಕಿದೆ. ಮಾಜಿ ಸೈನಿಕರ ಕುಟುಂಬಗಳ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಹೋರಾಡುವುದು ಮೂಲ ಉದ್ದೇಶವಾಗಿದ್ದು ಇದಕ್ಕೆ ಪ್ರತ್ಯೇಕವಾಗಿ ಒಕ್ಕೂಟ ಏಕೆ ಬೇಕಿದೆ. ಈ ಕಾರ್ಯವನ್ನು ನಾವು ನಮ್ಮ ಸಂಘದ ಮುಖಾಂತರ ಕಳೆದ 25 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಮಾಜಿ ಸೈನಿಕರ ಪರವಾಗಿ ಸಂಘ ಸದಾ ಇರುತ್ತದೆ ಹೊರತು ಹೊಸ ಒಕ್ಕೂಟಕ್ಕೆ ನಮ್ಮ ಸಹಕಾರವಿಲ್ಲ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಎಸ್.ಆರ್.ಮಾದಪ್ಪ, ಖಜಾಂಚಿ ನರೇಶ್ ಕುಮಾರ್ ಇದ್ದರು.
Back to top button
error: Content is protected !!