ಧಾರ್ಮಿಕ

ಲೋಕಕಲ್ಯಾಣಕ್ಕಾಗಿ ಕಣಿವೆ ರಾಮನ ಸನ್ನಿಧಿಯಲ್ಲಿ ಕೋಟಿ ಜಪಯಜ್ಞ

ಕುಶಾಲನಗರ, ಮೇ 21:  ಕಣಿವೆಯ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣದ ಹಿತದೃಷ್ಟಿಯಿಂದ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ನೇತೃತ್ವದಲ್ಲಿ ಕೋಟಿಗೂ ಅಧಿಕ ರುದ್ರ ಜಪ ಪಾರಾಯಣ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೂ ಜರುಗಿತು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಋತ್ವಿಕರು ನಿರಂತರವಾಗಿ ಜಪ ಪಾರಾಯಣ ಮಾಡುವ ಮೂಲಕ ಭಕ್ತಿ ಭಾವ ಮೆರೆದರು.
ಇದರ ಅಂಗವಾಗಿ ದೇವಾಲಯದಲ್ಲಿ ಶ್ರೀ ರಾಮಲಿಂಗೇಶ್ವರ ದೇವರಿಗೆ ಬಗೆ ಬಗೆಯ ಪುಷ್ಪಗಳಿಂದ ವಿಶೇಷವಾದ ಅಲಂಕಾರ ಹಾಗೂ ಪೂಜೆ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರಿಂದ ನಡೆಯಿತು.
ಬಳಿಕ ದೇವಾಲಯದ ಆವರಣದಲ್ಲಿ ದೇವತಾ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಉಪಸ್ಥಿತಿಯಲ್ಲಿ ಚಂಡಿಕಾ ಹೋಮ ಜರುಗಿತು.
ಈ ಸಂದರ್ಭ ಮಾತನಾಡಿದ ಶ್ರೀ ಕಾಂತಾರಾಜ ಮಹಾರಾಜ್, ದೇಶದಲ್ಲಿ ಹಾಗೂ ವಿಶ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವರಲ್ಲಿ ಅಶಾಂತಿ, ಅತೃಪ್ತಿ, ಅಸಹನೆ ನಿರಂತರವಾಗಿದೆ.
ಹಾಗಾಗಿ ಮನುಷ್ಯ ಮನುಷ್ಯರಲ್ಲಿ ದ್ವೇಷ, ಅಸೂಯೆ, ಮತ್ಸರಗಳು ನಡೆಯುತ್ತಿವೆ. ಹಾಗಾಗಿ ಮಾನವ ಕುಲ ಹಾಗೂ ಸಮಸ್ತ ಜೀವ ಸಂಕುಲ ನೆಮ್ಮದಿ ಹಾಗೂ ಶಾಂತಿಯಿಂದ ಬದುಕಲು ಪರಮಾತ್ಮನ ಅನುಗ್ರಹ ಬೇಕಿದೆ.
ಆದ್ದರಿಂದ ಭಗವಂತನನ್ನು ಸ್ಮರಿಸುವ ಮತ್ತು ಲೋಕದಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿಗಳ ನಿಯಂತ್ರಣಕ್ಕಾಗಿ ಮತ್ತು ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಹಬಾಳ್ವೆ ನೆಲೆಸುವಂತೆ ಮಾಡಲು ಇಂತಹ ಯಜ್ಞ, ಜಪ ಪಾರಾಯಣಗಳನ್ನು ನಡೆಸಲಾಗುತ್ತಿದೆ. 2030 ರ ವರೆಗೂ ಕೋಟಿ ಯಜ್ಞ ಜಪ ಪಾರಾಯಣ ನಿರಂತರವಾಗಿ ನಡೆಯಲಿದೆ. ದೇವಾಲಯಗಳು ಸಮಸ್ತ ಜನಕೋಟಿಗೆ ಶಾಂತಿ ಹಾಗು ನೆಮ್ಮದಿಯನ್ನು ನೀಡುವ ಪವಿತ್ರ ಕ್ಷೇತ್ರಗಳು ಎಂದು ಶ್ರೀ ಕಾಂತಾರಾಜ್ ಹೇಳಿದರು.
ಕೋಟಿ ಯಜ್ಞ ಜಪ ಪಾರಾಯಣದಲ್ಲಿ ಹಿರಿಯೂರು ಸ್ವಾಮಿ ಬ್ರಹ್ಮಾನಂದ ಸ್ವಾಮೀಜಿ, ಸಮಿತಿಯ ಕಾರ್ಯಾಧ್ಯಕ್ಷ ಮಡಿಕೇರಿಯ ರಮೇಶ್ ಹೊಳ್ಳ, ಉಪಾಧ್ಯಕ್ಷ ಸಂಪತ್ ಕುಮಾರ್, ನಿರ್ದೇಶಕ ಬಿ.ಸಿ.ದಿನೇಶ್, ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಮಂಜುನಾಥ್, ಲೋಕೇಶ್, ನವೀನ್, ಹುಲುಸೆ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಹೇಶ್ ಇದ್ದರು.
ಇದೇ ಸಂದರ್ಭ ದೇವಾಲಯ ಸಮಿತಿಯಿಂದ ಶ್ರೀ ಕಾಂತಾನಂದ ಮಹಾರಾಜ್ ಅವರ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಕಣಿವೆ, ಹುಲುಸೆ ಮೊದಲಾದ ಗ್ರಾಮಗಳ ಸಮಸ್ತ ಭಕ್ತಾಧಿಗಳಿಗೆ ಪ್ರಸಾದ ಅನ್ನಸಂತರ್ಪಣೆ ನೆರವೇರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!