ಸುದ್ದಿಗೋಷ್ಠಿ

ಸೆ 27 ರಂದು ಕುಶಾಲನಗರದಲ್ಲಿ ಸಾರ್ವಜನಿಕ ಸೀರತ್ ಸಮಾವೇಶ: ಪುಸ್ತಕ ಬಿಡುಗಡೆ, ಪ್ರದರ್ಶನ ಕಾರ್ಯಕ್ರಮ

ಕುಶಾಲನಗರ, ಸೆ 25: ಪ್ರತಿ ವರ್ಷದಂತೆಯೇ ಈ ವರ್ಷವೂ ಪ್ರವಾದಿ ಪೈಗಂಬರ್ ಮುಹಮ್ಮದ್ ರವರು ಜನಿಸಿದ ತಿಂಗಳಿನಲ್ಲಿ ಪ್ರವಾದಿಯವರ ಜೀವನ ಮತ್ತು ಸಂದೇಶದ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ.27 ರಂದು ಬಿಜಿಟಿ ಸಭಾಂಗಣದಲ್ಲಿ ಸಾರ್ವಜನಿಕ ಸೀರತ್ ಸಮಾವೇಶ, ಪುಸ್ತಕ ಬಿಡುಗಡೆ ಮತ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ
ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ ತಿಳಿಸಿದರು.
ಕುಶಾಲನಗರ
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕಳೆದ 8 ದಶಕಗಳಿಂದ ದೇಶದಲ್ಲಿ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಇಸ್ಲಾಮೀ ಸಂಘಟನೆಯಾಗಿದೆ. ನಮ್ಮ ಬಹುಧರ್ಮಿಯ ಸಮಾಜದಲ್ಲಿ ಪರಸ್ಪರ ನಂಬಿಕೆ. ಗೌರವ ಮತ್ತು ಸಹನೆಯ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸಮಾಜದ ವಿವಿಧ ವರ್ಗಗಳ ನಡುವೆ ಶಾಂತಿ, ನ್ಯಾಯ ಮತ್ತು ಸಮಾನತೆಯನ್ನು ಸಾಧಿಸುವುದು ಸಂಘಟನೆಯ ಮುಖ್ಯ ಧ್ಯೇಯೋದ್ದೇಶಗಳಲ್ಲಿ ಒಂದಾಗಿದೆ. ಇದಕ್ಕಾಗಿ ಜಮಾಅತೆ ವಿವಿಧ ಧರ್ಮದವರೊಂದಿಗೆ ಸೌಹಾರ್ದ ಕೂಟ, ಸ್ಥಳೀಯ ಭಾಷೆಗಳಲ್ಲಿ ಕುರ್‌ ಆನ್ ಪ್ರವಚನ, ಪ್ರವಾದಿ ಜೀವನ ಸಂದೇಶ ಸಾರುವ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಈ ವರ್ಷದ ಸೀರತ್ ಪ್ರಯುಕ್ತ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವೊಂದನ್ನು ನಡೆಸುತ್ತಿದೆ ಎಂದರು.
ಮನೆ-ಮನೆಗೆ ಭೇಟಿ ನೀಡಿ ಪ್ರವಾದಿ ಸಂದೇಶಗಳ ಪರಿಚಯ, ವಿಚಾರಗೋಷ್ಠಿ, ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರ, ಪ್ರವಾದಿಯವರ ಜೀವನದ ಕಡೆಗೆ ಬೆಳಕು ಚೆಲ್ಲುವ ಪುಸ್ತಕಗಳ ಪ್ರಕಟಣೆ, ಸೀರತ್ ಸೌಹಾರ್ದ ಕೂಟಗಳನ್ನು ನಡೆಸುತ್ತ ಬರುತ್ತಿದೆ.
ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆ ಈ ವರ್ಷದ ಸೀರತ್ ಪ್ರಯುಕ್ತ ಹೊರತಂದಿರುವ ಎರಡು ಕೃತಿಗಳನ್ನು ಜಿಲ್ಲೆಯ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ರವರು ಬಿಡುಗಡೆ ಮಾಡಲಿದ್ದಾರೆ. ಕ.ಸಾ.ಪ.ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್‌, ಶಾಂತಿ ಪ್ರಕಾಶನದ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ಎಂ.ಹೆಚ್.ಮುಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಾಹಿತಿ ಫಾನ್ಸಿ ಮುತ್ತಣ್ಣ, ಕ.ಸಾ.ಪ.ತಾಲ್ಲೂಕು ಅಧ್ಯಕ್ಷ ನಾಗೇಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅರ್ಜುನ್ ಮೌರ್ಯ ಪಾಲ್ಗೊಳ್ಳಲಿದ್ದಾರೆ.
ಸಂಜೆ 7 ಗಂಟೆಗೆ ನಡೆಯುವ ಸೀರತ್‌ ಸಮಾವೇಶವನ್ನು ಹಿರಿಯ ವಕೀಲ ನಾಗೇಂದ್ರಬಾಬು ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಮಂತರ್ ಗೌಡ, ಸಿ.ಎಸ್.ಐ.ಕೊಡಗು ವಲಯ ಉಪಾಧ್ಯಕ್ಷ ರೆ.ಫಾ.ಸ್ಯಾಮುವೆಲ್ ಮನೋಜ್ ಕುಮಾರ್, ಬೈಲುಕೊಪ್ಪದ ನಾಮ್ ಡ್ರೋಲಿಂಗ್ ಮೋನಸ್ಟ್ರಿಯ ತುಲ್ಕು ಚೋದರ್ ರಿನ್ ಪೋಚೆ,ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್,ಸ್ವಾಗತ ಸಮಿತಿಯ ಗೌರವಾಧ್ಯಕ್ಷ ನಿವೃತ್ತ ಶಿಕ್ಷಕ ನಝೀರ್ ಅಹಮದ್ ಪಾಲ್ಗೊಳ್ಳಲಿದ್ದು
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಎಂ.ಎಚ್.ಮುಹಮ್ಮದ್ ಕುಂಇ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜೊತೆಗೆ ಕುಶಾಲನಗರದ ವಿವಿಧ ಸಮಾಜಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್, ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್, ಸ್ವಾಗತ ಸಮಿತಿ ಸದಸ್ಯ ಎಂ.ಪಿ.ರಫೀಕ್,ಎಂ.ಎ.ಮುಸ್ತಫಾ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!