ಕುಶಾಲನಗರ, ಜು 06: ಈಗಾಗಲೆ ಸರಕಾರದ ಅಧಿಸೂಚನೆಯಂತೆ
ಕನಿಷ್ಠ ವೇತನ ಜಾರಿಯಾಗಿದ್ದರೂ ಕೂಡ ಅದು ಇದುವರೆಗೆ ನೌಕರರಿಗೆ ತಲುಪಿಲ್ಲ. ಈ ನಿಟ್ಟಿನಲ್ಲಿ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ಜುಲೈ 9 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ನೌಕರರಿಗೆ ಸರಕಾರದ ನಿಧಿಯಿಂದ ವೇತನ ನೀಡಬೇಕು, ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿ ಸಂಘಟನೆ ಹೋರಾಟ ನಡೆಸಿ ಯಶಸ್ವಿಯಾಗಿದೆ. ಇದೇ ರೀತಿ ವೇತನ ಪರಿಷ್ಕೃರಣೆಗೆ ಒತ್ತಾಯಿಸಿ ಕಳೆದ ನಾಲ್ಕೈದು ವರ್ಷಗಳಿಂದ ಸಿಐಟಿಯು ನ ಜಂಟಿ ಹೋರಾಟದ ಫಲವಾಗಿ 2026ರ ಜುಲೈ 22 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಆದರೆ ದೊಡ್ಡ ದೊಡ್ಡ ಗುತ್ತಿಗೆದಾರರು, ಇಂಡಸ್ಟ್ರಿಯಲ್, ಪ್ಲಾಂಟೇಷನ್ ಮಾಲೀಕರುಗಳ ಷಡ್ಯಂತ್ರದಿಂದಾಗಿ ಆದೇಶದ ಫಲ ಇದುವರೆಗೆ ಪಂಚಾಯಿತಿ ನೌಕರರಿಗೆ ತಲುಪಿಲ್ಲ. ಇಂದಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಗ್ರಾಪಂ ನೌಕರರ ಬದುಕು ದುಸ್ಥರವಾಗಿದೆ. ಬರುತ್ತಿರುವ ಸಂಬಳ ಸಾಲದಾಗಿದೆ.
ಸರಕಾರದ ಅಧಿಸೂಚನೆ ನಗದು ರೂಪದಲ್ಲಿ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಿದೆ. ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾರದೇ ಒತ್ತಡಕ್ಕೆ ಮಣಿಯದೆ ಅಧಿಸೂಚನೆಯನ್ನು ಕಾರ್ಯರೂಪಕ್ಕೆ ತರಬೇಕಿದೆ.
ಇದರೊಂದಿಗೆ ಪ್ರತಿ ತಿಂಗಳ ವೇತನ, ಪ್ರತಿ ವರ್ಷದ ನವೀಕರಣ ರದ್ದತಿ, ನೌಕರರ ಹಿರಿತನ ಪರಿಗಣಿಸಿ ಇಂಕ್ರಿಮೆಂಟ್, ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ರೂ 6 ಲಕ್ಷ ಇಡಗಂಟು ಕೊಡಬೇಕು ಎಂಬಿತ್ಯಾಧಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ರಂಗಸ್ವಾಮಿ ಇದ್ದರು.
Back to top button
error: Content is protected !!