ಕುಶಾಲನಗರ, ಜು 05:ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾಕ್ಟರ್ ಚೇತನ್ .ಎಂ ರವರು ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಶ್ರಮವಹಿಸಬೇಕು, ಮೊಬೈಲನ್ನು ಸಕಾರಾತ್ಮಕವಾಗಿ ಒಳ್ಳೆಯ ಉದ್ದೇಶಕ್ಕಾಗಿ ಬಳಸಲು ಕರೆ ನೀಡಿದರು. ಹಾಗೆಯೇ ಸ್ವಾಮಿ ವಿವೇಕಾನಂದರ ಅಧ್ಯಾಯ ವಾಕ್ಯವನ್ನು ಉಲ್ಲೇಖಿಸುತ್ತಾ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಒಂದು ತಪಸ್ಸಿನಂತೆ ರೂಪಿಸಬೇಕೆಂದು ಕರೆ ನೀಡುತ್ತಾ ಗುರು ಹಿರಿಯರು ತಂದೆ ತಾಯಿಗಳನ್ನು ಗೌರವದಿಂದ ಕಾಣಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎನ್ ಎನ್ ಶಂಬುಲಿಂಗಪ್ಪ ವಹಿಸಿ ವಿದ್ಯಾರ್ಥಿಗಳು ಮೋಬೈಲ್ ನಿಂದ ದೂರವಿದ್ದು , ನಿರಂತರ ಶ್ರಮದಿಂದ ಸಾಧಿಸಿದರೆ ಯಶಸ್ಸು ಸಾಧ್ಯ ಎಂಬ ಹಿತವಚನ ನೀಡಿದರು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಕ್ಲಾರಾ ರೇಷ್ಮಾ ಸ್ವಾಗತಿಸಿದರು. ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಶ್ರೀ ನಂಜಪ್ಪ ಹಾಗೂ ಆಡಳಿತಾಧಿಕಾರಿ ಶ್ರೀ ಮಹೇಶ್ , ಉಪನ್ಯಾಸಕ ವೃಂದ , ಪೋಷಕರು ಮುಂತಾದವರು ಉಪಸ್ಥಿತರಿದ್ದರು.
Back to top button
error: Content is protected !!