ಕ್ರೈಂ
ಕುಶಾಲನಗರದಲ್ಲಿ ಕೋ-ಅಪರೇಟಿವ್ ಸೊಸೈಟಿಯಲ್ಲಿ ವಂಚನೆ: ದೂರು ದಾಖಲು

ಕುಶಾಲನಗರ, ಅ 21: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನಪೇಟೆಯಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ವಿರುದ್ದ ವಂಚನೆ ದೂರು ದಾಖಲಾಗಿದೆ.
ಬೈಲುಕುಪ್ಪೆ ನಿವಾಸಿಯಾದ ಚಂದ್ರಹಾಸ ಕೆ.ಟಿ. (52 ವರ್ಷ) ಎಂಬುವವರು ದಿನಾಂಕ: 01-06-2023 ರಿಂದ ಸದರಿ ಸೂಸೈಟಿಯಲ್ಲಿ ಪಿಗ್ಮಿ ಕಟ್ಟಲು ಪ್ರಾರಂಭಿಸಿ 2024ನೇ ಸಾಲಿನ ಫೆಬ್ರವರಿ ತಿಂಗಳ ವರೆಗೆ ರೂ. 99,500/- ಗಳ ಹಣವನ್ನು ಪಿಗ್ಗಿ ಕಟ್ಟಿದ್ದು, ಸದರಿ ಹಣವನ್ನು ಹಿಂತಿರುಗಿಸದೆ ಮಾರ್ಚ್-2024 ನೇ ತಿಂಗಳಿನಿಂದ ಕಛೇರಿಯನ್ನು ಮುಚ್ಚಿರುವ ಹಿನ್ನಲೆಯಲ್ಲಿ ಮುಖ್ಯಸ್ಥ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ ಹಾಗೂ ಇತರರು ಸೇರಿ ವಂಚನೆ ಮಾಡಿರುವ ಕುರಿತು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪ, ವಿರಾಜಪೇಟೆ ಹಾಗೂ ಕುಶಾಲನಗರದಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಛೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಮಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಛೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಕುರಿತು ಗೋಣಿಕೊಪ್ಪ, ವಿರಾಜಪೇಟೆ ನಗರ ಹಾಗೂ ಕುಶಾಲನಗರ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಲ್ಲಿ ದಾಖಲಾತಿಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ಕೋರಿದೆ.




