ಕಾರ್ಯಕ್ರಮ

ತಲಕಾವೇರಿ ಪವಿತ್ರ ತೀರ್ಥೋದ್ಭವ; ಸಿದ್ಧತೆ ಪರಿಶೀಲಿಸಿದ ಶಾಸಕರು

ಕುಶಾಲನಗರ ಅ.16: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಸಂಬಂಧ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭಾನುವಾರ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲಿಸಿದರು.
ಭಾಗಮಂಡಲದಲ್ಲಿ ಮುಡಿಶೆಡ್, ತ್ರಿವೇಣಿ ಸಂಗಮ ಬಳಿ ಪಿಂಡ ಪ್ರಧಾನ ವ್ಯವಸ್ಥೆ, ಶೌಚಾಲಯ, ಸ್ವಚ್ಚತೆಗೆ ಕ್ರಮ ಮತ್ತಿತರವನ್ನು ಪರಿಶೀಲಿಸಿದರು.
ಬಳಿಕ ತಲಕಾವೇರಿಗೆ ತೆರಳುವ ಮಾರ್ಗ ಭಾಗಮಂಡಲದಿಂದ ತಲಕಾವೇರಿ ವರೆಗೆ ವಿದ್ಯುತ್ ದೀಪ, ತಲಕಾವೇರಿಯಲ್ಲಿ ಪೋಕಸ್ ಬೆಳಕು ವ್ಯವಸ್ಥೆ, ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಪೂಜಾ ಕಾರ್ಯದ ಸಿದ್ಧತೆ ಮತ್ತಿತರವನ್ನು ಪರಿಶೀಲಿಸಿದರು.
ವಾಹನಗಳ ನಿಲುಗಡೆಗೆ ವ್ಯವಸ್ಥೆ, ಬ್ಯಾರಿಕೇಡ್‍ಗಳ ನಿರ್ಮಾಣ, ಭಕ್ತಾಧಿಗಳಿಗೆ ಅನ್ನ ಸಂತರ್ಪನೆ ಹೀಗೆ ಹಲವು ಸಿದ್ಧತೆಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೋಮವಾರ ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಪವಿತ್ರ ತೀರ್ಥೋದ್ಭವ ಸಂಬಂಧ ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಭೆ ನಡೆದಿದೆ. ಈ ಬಾರಿ ಕೋವಿಡ್ ಇಲ್ಲದ ಕಾರಣ ಭಕ್ತಾಧಿಗಳಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಗಮನಹರಿಸಲಾಗಿದೆ. ಭಕ್ತಾಧಿಗಳು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡಬಾರದು. ಶ್ರದ್ದಾಭಕ್ತಿಯಿಂದ ತಾಯಿ ಶ್ರೀ ಕಾವೇರಿ ಮಾತೆಯಲ್ಲಿ ಪ್ರಾರ್ಥೀಸಬೇಕು. ಭಕ್ತಿ ಮತ್ತು ಪ್ರೀತಿಯಿಂದ ತೀರ್ಥೋದ್ಭವಕ್ಕೆ ಸಹಕರಿಸಬೇಕು ಎಂದು ಅವರು ಕೋರಿದರು.
ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಬಸ್ ಕಲ್ಪಿಸಲಾಗಿದೆ. ಹಿಂದಿನಂತೆ ಪವಿತ್ರ ತೀರ್ಥೋದ್ಭವ ನಂತರ ಕೊಳದಲ್ಲಿ ಭಕ್ತಾಧಿಗಳಿಗೆ ಪವಿತ್ರ ಸ್ನಾನಕ್ಕೆ ಅವಕಾಶ ಇದೆ. ಭಕ್ತಾಧಿಗಳು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಬಾರದು ಎಂದು ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್, ಆದಿ ಚುಂಚನಗಿರಿ ಮಠದ ಮೈಸೂರು ಶಾಖೆಯ ಸ್ವಾಮೀಜಿ ಇತರರು ತೀರ್ಥೋದ್ಭವ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.
ತೀರ್ಥೋದ್ಭವ ದಿನವಾದ ಸೋಮವಾರ ಸಂಜೆ 5 ಗಂಟೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಲಿದೆ ಎಂದು ಪ್ರಮುಖ ಅರ್ಚಕರಾದ ಗುರುರಾಜ್ ಆಚಾರ್ಯ ಅವರು ಮಾಹಿತಿ ನೀಡಿದರು. 9 ಮಂದಿ ಅರ್ಚಕರು ಪವಿತ್ರ ತೀರ್ಥೋದ್ಭವದಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಲಿದ್ದಾರೆ ಎಂದರು.
ಕುಂಕುಮಾರ್ಚನೆ, ಅಭಿಷೇಕ ಹಾಗೂ ಮಹಾಪೂಜಾ ಕಾರ್ಯಗಳು ಜರುಗಲಿವೆ. ನಾಡಿಗೆ ಒಳಿತಾಗುವಲ್ಲಿ ತಾಯಿ ಶ್ರೀ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದರು.
ಶ್ರೀ ಕಾವೇರಿ ಮಾತೆ, ಹಾಗೆಯೇ ಮಹಾಗಣಪತಿ, ಅಗಸ್ತೇಶ್ವರ ದೇವಾಲಯ ಸೇರಿದಂತೆ ಎಲ್ಲಡೆ ಹೂವಿನ ಅಲಂಕಾರ ಮಾಡಲಾಗಿದೆ.
ತಾತ್ಕಾಲಿಕ ಕ್ಲಿನಿಕ್, ಶ್ರೀ ಕಾವೇರಿ ಮಾತೆ ಧಾರ್ಮಿಕ ಗೀತಗಾಯನ ಕಾರ್ಯಕ್ರಮ, ತಲಕಾವೇರಿಯಲ್ಲಿ ಶುಚಿತ್ವಕ್ಕೆ ಒತ್ತು ನೀಡುವುದು, ಅಲ್ಲಲ್ಲಿ ಡಸ್ಟ್‍ಬಿನ್ ಇಡುವುದು, ಹೀಗೆ ಹಲವು ಕಾರ್ಯಗಳು ನಡೆದಿವೆ.
ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಭಗಂಡೇಶ್ವರ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಹರಿಸಲಾಗಿದೆ. ಭಕ್ತಾಧಿಗಳು ಸಹಕರಿಸುವಂತೆ ಕೋರಿದರು.
‘ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಪೊಲೀಸ್ ಇಲಾಖೆಯಿಂದ ಮೂವರು ಡಿವೈಎಸ್‍ಪಿಗಳು, 7 ಇನ್ಸ್‍ಪೆಕ್ಟರ್, 17 ಸಬ್ ಇನ್ಸ್‍ಪೆಕ್ಟರ್, 300 ಪೊಲೀಸರು, 100 ಮಂದಿ ಮೀಸಲು ಪೊಲೀಸ್ ಸಶಸ್ತ್ರ ಪಡೆಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.’
ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರ ನೇತೃತ್ವದಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿ ತಾಯಿ ಶ್ರೀ ಕಾವೇರಿ ಮಾತೆಗೆ ಭಾನುವಾರ ತೊಡಿಸಲಾಯಿತು. ತಾ.ಪಂ.ಇಒ ಶೇಖರ್ ಇತರರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us