ಕುಶಾಲನಗರ, ಮೇ 21: ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಜರಿದ ಪರಿಣಾಮ ಶಿಕ್ಷಕಿ ಶಾಂತಲಾ ಎಂಬವರ ಮನೆಗೆ ಅಪಾರ ಹಾನಿ ಉಂಟಾಗಿದೆ.
ಕುಶಾಲನಗರ ಉರ್ದು ಶಾಲಾ ಶಿಕ್ಷಕಿಯಾಗಿರುವ ಶಾಂತಲಾ ಅವರ ಮನೆಯ ಪಕ್ಕದಲ್ಲಿ ಖಾಸಗಿ ಜಮೀನಿನಿಂದ ಮಳೆ ನೀರು ಹರಿದು ಬರುವ ಹಿನ್ನಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ 57 ಅಡಿ ಉದ್ದದ 9 ಅಡಿ ಎತ್ತರದಲ್ಲಿ ತಡೆಗೋಡೆ ನಿರ್ಮಿಸಿದ್ದರು. ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಎತ್ತರ ಪ್ರದೇಶದಿಂದ ತಗ್ಗು ಪ್ರದೇಶದತ್ತ ಹರಿದು ಬಂದ ಮಳೆ ನೀರಿನ ಒತ್ತಡಕ್ಕೆ ಬರೆ ಕುಸಿದಿದೆ. ಪರಿಣಾಮ ತಡೆಗೋಡೆ ಜರಿದು ಶಾಂತಲಾ ಅವರ ಮನೆಗೆ ಅಪ್ಪಳಿಸಿದೆ. ಘಟನೆಯಲ್ಲಿ ಮನೆಯ ಬೆಡ್ ರೂಂ, ಅಡುಗೆ ಕೋಣೆ, ಡೈನಿಂಗ್ ರೂಂ ಗೋಡೆ ನೆಲಕಚ್ಚಿದೆ. ಮನೆಗೆ ಹೊಂದಿಕೊಂಡಂತೆ ಬೆಳೆಸಲಾಗಿದ್ದ 10 ಅಡಿಕೆ ಮರಗಳು ಕೂಡ ಮುರಿದು ಬಿದ್ದಿದೆ. ಅಡಿಕೆ ಗಿಡಗಳಿಗೆ ಸಂಭವಿಸಬಹುದಾದ ಹೆಚ್ಚಿನ ಅಪಾಯ ತಪ್ಪಿದೆ. ಮನೆ ಮೇಲಿನ ಪ್ಯಾರಾಪಿಟ್ ವಾಲ್ ಕೂಡ ಜಖಂಗೊಂಡಿದೆ.
ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷದಷ್ಟು ಹಣ ವ್ಯಯಿಸಲಾಗಿದೆ. ಮನೆಯ ಕೋಣೆಗಳ ಗೋಡೆಗಳು ಜಖಂಗೊಂಡಿದ್ದು ಎಲ್ಲವೂ ಹೊಸದಾಗಿ ನಿರ್ಮಿಸಬೇಕಿದೆ. ಘಟನೆಯಿಂದ 15 ಲಕ್ಷದಷ್ಟು ಹಾನಿ ಉಂಟಾಗಿದೆ ಎಂದು ಶಿಕ್ಷಕಿ ಶಾಂತಲಾ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ಕಿರಣ್ ಗೌರಯ್ಯ, ಕೂಡುಮಂಗಳೂರು ಗ್ರಾಪಂ ಪಿಡಿಒ ಸಂತೋಷ್ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದಾರೆ. ಘಟನೆ ನಡೆದು 24 ಗಂಟೆ ಕಳೆದರೂ ಕೂಡ ತಡೆಗೋಡೆ ತೆರವುಗೊಳಿಸುವುದಾಗಿ ಯಾವುದೇ ರೀತಿಯ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಶಾಂತಲಾ ಅವರು ಆರೋಪಿಸಿದ್ದಾರೆ.ಕೂಡಲೆ ಅಗತ್ಯ ಪರಿಹಾರ ಒದಗಿಸುವಂತೆ ಅವರು ಕೋರಿದ್ದಾರೆ.
Back to top button
error: Content is protected !!