ಕೊಡ್ಲಿಪೇಟೆ, ಸೆ 03: ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ಶ್ರೀವೀರಭದ್ರ ದೇವರು. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈಹಿಡಿದು ಮುನ್ನಡೆಸಿದ ಮಹಾನುಭಾವನೇ ಶ್ರೀ ವೀರಭದ್ರ ಎಂದು ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ (ರಿ) ಕೊಡಗು ಜಿಲ್ಲೆ, ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಇವರುಗಳ ಸಹಯೋಗದೊಂದಿಗೆ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ದಂತಿ ಆರನೇ ವರ್ಷದ ಮಹೋತ್ಸವ ಕಾರ್ಯಕ್ರಮಕ್ಕೆ ನೀರಗುಂದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಚಾಲನೆಮಾಡಿ ಆಶೀರ್ವಚನದಲ್ಲಿ ಮಾತನಾಡಿದ ಅವರು ಭಾದ್ರಪದ ಮಾಸದ ಮೊದಲ ಮಂಗಳವಾರದಂದು ಪ್ರತೀ ವರ್ಷ ಶ್ರೀ ಸ್ವಾಮಿಯ ಜಯಂತಿ ಆಚರಿಸಲಾಗುತ್ತಿದೆ, ಮಾನವನ ಇಹದ ಬದುಕಿನ ಸ್ತರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಮಹಾಶಕ್ತಿ ಸಂಚಯವು ನಿರಂತರ ಪ್ರಭಾವ ಬೀರುತ್ತದೆ ಎಂದರು.
ಸಾಕ್ಷಾತ್ ಶಿವನೇ ತೊಂದರೆ ಯಲ್ಲಿದ್ದಾಗ ರಕ್ಷಣೆಗೆ ಅವತರಿಸಿದ ದೈವ ಪುರುಷ, ದುಷ್ಟರ ಸಂಹಾರ- ಶಿಷ್ಯರ ರಕ್ಷಣೆ ಸರ್ವರಿಗೂ ಒಳಿತನ್ನು ಮಾಡುವ ದೇವರಾಗಿದ್ದು, ಕ್ಷಾತ್ರ ತೇಜಸ್ಸಿನ ಪ್ರತೀಕ. ಅನ್ಯಾಯ, ಅನಾಚಾರ, ಅಧರ್ಮಗಳ ವಿರುದ್ಧ ಹೋರಾಡಲು ಪ್ರೇರಣಾದಾಯಕನಾಗಿದ್ದು ವೀರಭದ್ರೇಶ್ವರ ಎಂದರು.
ಮುಂಜಾನೆ 5 ಗಂಟೆಯಿಂದಲೇ ಮಹಾರುದ್ರಾಬಿಷೇಕ, ಫಲ – ಪುಷ್ಪ ನೈವೇದ್ಯ, ಅಷ್ಟೋತ್ತರ ಪೂಜೆ , ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು
ಪೂಜಾ ಕೈಂಕರ್ಯಗಳು ಶ್ರೀ ಮಣಿಕಂಠ ಅರ್ಚಕರು, ಹಾಗು ಶ್ರೀ ಚಂದ್ರಯ್ಯ ಅರ್ಚಕರ ನೇತೃತ್ವದಲ್ಲಿ ನಡೆಯಿತು.
ನೀರಗುಂದ ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಮಿತಿ ಸದಸ್ಯರು ಹಾಗು ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!