ಕುಶಾಲನಗರ ಅ 03. ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಜಮಾಬಂಧಿ ಕಾರ್ಯಕ್ರಮವು ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಪಂಚಾಯತಿ ಅಧ್ಯಕ್ಷೆ ಲತಾಬಾಯಿ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ, ಸಿ ರವಿ 2022-23ನೇ ಸಾಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಯೋಜನೆಯ ಕಾಮಗಾರಿಗಳ ಜಮಾ ಮತ್ತು ಖರ್ಚಿನ ಬಗ್ಗೆ ವಿವರವಾದ ವರದಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಓದಿ ಹೇಳಿದರು. ನಂತರ ಸಾರ್ವಜನಿಕರಿಂದ ಅನುಮೋದನೆ ಪಡೆಯಲಾಯಿತು.
ಸಾರ್ವಜನಿಕರು ಕುಡಿಯುವ ನೀರು, ಬೀದಿ ದೀಪ ಮತ್ತು ನೈರ್ಮಲ್ಯ ಕೆಲಸಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಸಭೆಯಲ್ಲಿ ತಿಳಿಸಿದರು. ಶುದ್ಧ ಕುಡಿಯುವ ನೀರಿನ ಘಟಕದ ದುರಸ್ಥಿ ಕೆಲಸವನ್ನು ತುರ್ತಾಗಿ ಮಾಡಿಸುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಶೆಟ್ಟಿ ನವರು ನೋಡಲ್ ಅಧಿಕಾರಿಯಾಗಿ ಆಗಮಿಸಿ ಮಾತನಾಡುತ್ತಾ ಸಾರ್ವಜನಿಕರು ಮನೆ ಕಂದಾಯ ಮತ್ತು ನೀರು ಕಂದಾಯವನ್ನು ನಿಗಧಿತ ಅವಧಿಯೊಳಗೆ ಪಾವತಿ ಮಾಡಿದಲ್ಲಿ ಮಾತ್ರ ಪಂಚಾಯಿತಿಯ ವತಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಸಾಧ್ಯ. ಆದ್ದರಿಂದ ಗ್ರಾಮ ಪಂಚಾಯಿತಿಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು. ಹಾಗೂ ಕುಡಿಯುವ ನೀರು, ಬೀದಿ ದೀಪ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ತುರ್ತಾಗಿ ಮಾಡಿಸುವಂತೆ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಶ್ರೀಕಾಂತ್, ಪ್ರದೀಪ, ಲಕ್ಷ್ಮಿ, ಮತ್ತು ಸರಿತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಸಿ. ರವಿ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಹೇಮಲತಾ ವಂದಿಸಿದರು.
Back to top button
error: Content is protected !!