ಕುಶಾಲನಗರ, ಸೆ 12: ಕುಶಾಲನಗರದ ರಂಗಭಾರತಿ ಕಲಾಮಂದಿರದ ಭರತನಾಟ್ಯ ವಿದ್ಯಾರ್ಥಿಗಳ ಗೆಜ್ಜೆಪೂಜೆ ಕಾರ್ಯಕ್ರಮ ನಡೆಯಿತು.
ಭರತನಾಟ್ಯ ವಿದ್ಯಾರ್ಥಿಗಳು
ರಥಬೀದಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ 16 ಮಂದಿ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು. ದೇವಿಯ ಪಾದಗಳ ಬಳಿ ಹೊಸ ಗೆಜ್ಜೆಗಳನ್ನು ಇಟ್ಟು ಪೂಜಿಸಿ
ದೇವರ ಆಶೀರ್ವಾದ ಕೋರಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಶ್ರೀಮುತ್ತಪ್ಪ ದೇವಾಲಯದಲ್ಲಿ ನೃತ್ಯ ಪ್ರದರ್ಶನದ ಮೂಲಕ ರಂಗಪ್ರವೇಶ ಮಾಡಲಾಯಿತು.
ಭರತನಾಟ್ಯ ಕಲಿಕೆಯಲ್ಲಿ ಗೆಜ್ಜೆಪೂಜೆಯು ವಿದ್ಯಾರ್ಥಿಗಳ ನಾಟ್ಯ ಪಯಣದ ಅತ್ಯಂತ ಪವಿತ್ರ ಹಾಗೂ ಪ್ರಮುಖ ಮೈಲಿಗಲ್ಲಾಗಿದೆ. ನೃತ್ಯದ ಆರಂಭಿಕ ಅಭ್ಯಾಸದ ನಂತರ ಮೊದಲ ಬಾರಿಗೆ ಕಾಲಿಗೆ ಗೆಜ್ಜೆ ಧರಿಸಲು ಗುರುವಿನಿಂದ ಅನುಮತಿ ಮತ್ತು ಆಶೀರ್ವಾದ ಪಡೆಯುವ ಧಾರ್ಮಿಕ ಚಟುವಟಿಕೆ ಇದಾಗಿದೆ ಎಂದು ಕಲಾಮಂದಿರ ಉಪಾಧ್ಯಕ್ಷೆ ನವ್ಯ ಅವರು ಮಾಹಿತಿ ನೀಡಿದರು. ಗೆಜ್ಜೆಪೂಜೆ ಮಹತ್ವದ ಕುರಿತು ಭರತನಾಟ್ಯ ಶಿಕ್ಷಕಿ ಮೇಘನಾ ಭಟ್ ವಿವರಿಸಿದರು.
ಈ ಸಂದರ್ಭ ಕಲಾಮಂದಿರ ಅಧ್ಯಕ್ಷ ಜನಾರ್ಧನ್,ಕಾರ್ಯದರ್ಶಿ ದೀಪ, ಶಿಕ್ಷಕಿ ತೇಜಸ್ವಿನಿ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಇದ್ದರು.