ಕುಶಾಲನಗರ, ಜೂ 20 : ಹೆಬ್ಬಾಲೆಯ ನಡುಬೀದಿ ಹಾಗೂ ಹಳಗೋಟೆ ಗ್ರಾಮದ ವೀರಮಡಿವಾಳರ ಸಂಘದ ಹಾಗೂ ದೇವಾಲಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಲಕ್ಷ್ಮೀದೇವಿ, ಗಣಪತಿ, ಭೈರವೇಶ್ವರ ದೇವಾಲಯದ 8ನೇ ವಾರ್ಷಿಕೋತ್ಸವ ಹಾಗೂ ಗೋಪುರ ಪ್ರತಿಷ್ಠಾಪನೆ ಶುಕ್ರವಾರ ವಿಜೃಂಭಣೆಯೊಂದಿಗೆ ಜರುಗಿತು.
ದೇವಾಲಯಅರ್ಚಕ ಚಂದ್ರ ಶೆಟ್ಟಿ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಶ್ರದ್ದಾ ಭಕ್ತಿಯಿಂದ ನಡೆದವು. ಮುಂಜಾನೆಯಿಂದಲೇ ಕುಂಭಾಭಿಷೇಕ ಸೇರಿದಂತೆ ಕಳಶ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಮುಂಜಾನೆ
ಕಾವೇರಿ ನದಿಗೆ ತೆರಳಿ ಗಂಗೆ ಪೂಜೆಯೊಂದಿಗೆ ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಮಂಗಳವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.ನಂತರ ದೇವಾಲಯಕ್ಕೆ ಬಂದು ಕಳಶ ಪ್ರತಿಷ್ಠಾನ ಮಾಡಲಾಯಿತು. ಬಳಿಕ ಶ್ರೀ ಮಹಾಲಕ್ಷ್ಮಿ,ಶ್ರೀ ಭೈರವೇಶ್ವರ, ಗಣಪತಿ ದೇವರಿಗೆ ಕಲಾಹೋಮ ಹಾಗೂ ಶುಭ ಕರ್ನಾಟಕ ಲಗ್ನದಲ್ಲಿ ಗೋಪುರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.
ಹೆಬ್ಬಾಲೆ ಗ್ರಾಮಸ್ಥರು ಸೇರಿದಂತೆ ಹಳಗೋಟೆ,ಮರೂರು,ಆರನೇ ಹೊಸಕೋಟೆ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು
ದೇವಾಲಯ ಸಮಿತಿ ಅಧ್ಯಕ್ಷ ಮಲ್ಲೇಶ ಮಾತನಾಡಿ, ಗ್ರಾಮದ ವೀರಮಡಿವಾಳ ಸಂಘ ಹಾಗೂ ದೇವಾಲಯ ಸಮಿತಿ ವತಿಯಿಂದ ಲಕ್ಷ್ಮಿ, ಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಗ್ರಾಮಸ್ಥರು ಹಾಗೂ ದಾನಿಗಳು ವಾರ್ಷಿಕೋತ್ಸವಕ್ಕೆ ಸಹಕಾರ ನೀಡಿದ್ದಾರೆ. ದೇವಿಯು ಉತ್ತಮ ಮಳೆ ಬೆಳೆಯೊಂದಿಗೆ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಕಾರ್ಯದರ್ಶಿ ಮಂಜು ಮಾತನಾಡಿ, ಕಳೆದ ಎರಡು ದಿನಗಳಿಂದ ದೇವಿಯನ್ನು ವಿಶಿಷ್ಟ ಹಾಗೂ ವೈಶಿಷ್ಟಪೂರ್ಣವಾಗಿ ಆರಾಧಿಸಲಾಗಿದೆ.ನಮ್ಮ ಸಮುದಾಯದ ಬಾಂಧವರು ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಅಗತ್ಯ ಸಹಕಾರ ನೀಡಿದ್ದು, ದೇವಾಲಯ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಮಹಾಪೂಜೆಯ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಮಾತನಾಡಿದರು.
ಈ ಸಂದರ್ಭ ದೇವಾಲಯ ಸಮಿತಿ ಉಪಾಧ್ಯಕ್ಷ ಮಂಜು ಶೆಟ್ಟಿ
ಖಜಾಂಚಿ ಹೆಚ್.ವಿ.ಸೋಮಣ್ಣ,ಸದಸ್ಯರಾದ ಯೋಗೇಶ್,
ಮಹೇಶ್, ವೀರಪ್ಪ, ಬಸವಣ್ಣ, ಶಿವಕುಮಾರ್, ಮಹದೇವ, ಪ್ರಕಾಶ, ಪುಟ್ಟಣ್ಣ, ಚಂದ್ರ, ವೀರಾಜಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.