ಕುಶಾಲನಗರ ಅ. 14: ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ಈಗಾಗಲೇ ಮೂರು ಕೋಟಿಗೂ ಅಧಿಕ ವೆಚ್ಚದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಸಂಪೂರ್ಣವಾಗಿ ಪೂರ್ಣಗೊಂಡು ಅನೇಕ ಹಾಕಿ ಕ್ರೀಡಾಕೂಟಗಳು ಟರ್ಫ್ ಮೈದಾನದಲ್ಲಿ ನಡೆದಿವೆ .
ಮುಂದಿನ ತಿಂಗಳಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಯು ಕೂಡಿಗೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಕೂಡಿಗೆಯ ಕ್ರೀಡಾ ಶಾಲೆಯ ಹಾಕಿ ಟರ್ಫ್ ಮೈದಾನದ ಸುತ್ತಲೂ ಹೊನಲು ಬೆಳಕಿನ (ಫ್ಲಡ್ ಲೈಟ್) ದೀಪ ಆಳವಡಿಸುವುದಾಗಿ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಭರವಸೆ ನೀಡಿದ್ದಾರೆ.
ಅವರು ಕ್ರೀಡಾ ಶಾಲೆಯಲ್ಲಿ ನಡೆದ ರಾಜ್ಯದ ಮಟ್ಟದ ಹಾಕಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಂತಿಮ ಪಂದ್ಯಾಟ ಮುಕ್ತಾಯಗೊಳ್ಳಲು ತಡವಾಗಿ ನಂತರ ಕಾರ್ಯಕ್ರಮಗಳು ನಡೆಯಲು ಬೆಳಕಿನ ಅಡಚಣೆಯಾಗಿತ್ತು. ಇದನ್ನು ಮನಗಂಡ ಶಾಸಕರು ಕ್ರೀಡಾ ಶಾಲೆಯ ಹಾಕಿ ಮೈದಾನವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ರಾಜ್ಯ ಮಟ್ಟದ ಕ್ರೀಡಾ ಇಲಾಖೆ ಅಧಿಕಾರಿ ಮತ್ತು ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಹೊನಲು ಬೆಳಕಿನ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್ ಪಲ್ಲೇದ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಬಿ. ಟಿ. ಪೂರ್ಣೇಶ್, ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ದೇವುಕುಮಾರ್, ಜಿಲ್ಲಾ ಕಾಂಗ್ರೆಸ್ ಐ.ಎನ್. ಟಿ.ಸಿ. ಜಿಲ್ಲಾ ಅಧ್ಯಕ್ಷ ಬಿ.ಡಿ. ಅಣ್ಣಯ್ಯ, ಕೂಡ್ಲೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ ಕುಮಾರ್ ಸೇರಿದಂತೆ ದೈಹಿಕ ಶಿಕ್ಷಕರು ಹಾಜರಿದ್ದರು.
Back to top button
error: Content is protected !!