ಕ್ರೈಂ

ಪೋಕೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಎಸ್.ಸಿ./ಎಸ್.ಟಿ.(ದೌ) ತಡೆ ಕಾಯ್ದೆ ಅಡಿ ಕೃತ್ಯವೆಸಗಿದ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಕುಶಾಲನಗರ, ಸೆ 10: ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿಯಲ್ಲಿ ಸ್ಪೆಷಲ್ ಕೇಸ್:46/2024 ರ ಆರೋಪಿಗಳ ವಿರುದ್ಧ ಪ್ರಕರಣವು ದಿನಾಂಕ:10-09-2026 ರಂದು ತೀರ್ಪಾಗಿದ್ದು, ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ

ಪ್ರಕರಣದ ಸಾರಾಂಶ:- ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕಲ್ಲುಕೋರೆ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಕುಶಾಲನಗರದ ಕಾಲೇಜಿನಲ್ಲಿ ಪ್ರಥಮ ಪಿ.ಯುಸಿ.ಓದುತ್ತಿದ್ದು, ಈಕೆಯನ್ನು ಕಂಬಿಬಾಣೆ ಭೂದಾನ ಪೈಸಾರಿಯ ನಿವಾಸಿ ಬಿಲ್ಲವ ಜನಾಂಗಕ್ಕೆ ಸೇರಿದ ವಿವಾಹಿತನಾಗಿ ಒಂದು ಮಗುವಿನ ತಂದೆಯಾಗಿರುವ 1ನೇ ಆರೋಪಿ ದಿಲೀಪ್ ಕುಮಾರ್ ಬಿ.ವಿ. ಈತನು ಬಾಲಕಿಯನ್ನು ಪ್ರೀತಿಸುತ್ತಿದ್ದೇನೆಂದು ತನ್ನ ಮಾರುತಿ 800 ಕಾರಿನಲ್ಲಿ ಕರೆದುಕೊಂಡು ಹೋಗಿ ಸುತ್ತಾಡಿಸಿ, 2ನೇ ಆರೋಪಿ ಚಂದ್ರಪ್ಪ ಪಿ.ಇವರ ಕುಶಾಲನಗರ ಕೂಡಿಗೆಯಲ್ಲಿನ ಶ್ರೀ ಧನಲಕ್ಷ್ಮಿ ಲಾಡ್ಜ್ ಗೆ ಹಗಲು ವೇಳೆಯಲ್ಲಿ ಒಟ್ಟು 10ಕ್ಕಿಂತಲೂ ಹೆಚ್ಚು ಬಾರಿ ಕರೆದುಕೊಂಡು ಹೋಗಿ ಬಲಾತ್ಕಾರ ಲೈಂಗಿಕ ಸಂಪರ್ಕ ಮಾಡಿರುವುದು ಹಾಗೂ ದಿನಾಂಕ:10-02-2024 ರಂದು 1ನೇ ಆರೋಪಿತನು ಸಾಕ್ಷಿ 4 ದಿನೇಶ್ ರವರ ಅಂಗಡಿಯಿಂದ ನಕಲಿ ತಾಳಿ ಚೈನನ್ನು ಖರೀದಿ ಮಾಡಿ ಬಾಲಕಿಯನ್ನು ಕೂಡಿಗೆ ಗ್ರಾಮದ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವಸ್ಥಾನದ ಹೊರಭಾಗದಲ್ಲಿ ಬಾಲಕಿಯ ಕೊರಳಿಗೆ ತಾಳಿ ಚೈನನ್ನು ಹಾಕಿ ಬಾಲ್ಯ ವಿವಾಹ ಮಾಡಿಕೊಂಡಿರುವುದು ಹಾಗೂ ದಿನಾಂಕ:09-03-2024 ರಂದು ರಾತ್ರಿ 10.30 ಗಂಟೆಗೆ ಬಾಲಕಿಯನ್ನು ಆಕೆಯು ತನ್ನ ತಂದೆ ತಾಯಿಯೊಂದಿಗೆ ಮನೆಯಲ್ಲಿ ಇದ್ದ ಸಮಯ ಆಕೆಯನ್ನು ಅಲ್ಲಿಂದ ಅಪಹರಿಸಿಕೊಂಡು ಸಿದ್ದಾಪುರದ ಅರೆಕಾಡು ಮದರಗುಪ್ಪ ಎಸ್ಟೇಟಿಗೆ ಹೋಗುವ ಜಂಕ್ಷನ್‌ನಲ್ಲಿ ರಾತ್ರಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಬಾಲಕಿಗೆ ಬಲಾತ್ಕಾರ ಲೈಂಗಿಕ ಸಂಪರ್ಕ ಮಾಡಿ, ಮಧರಕುಪ್ಪದಲ್ಲಿರುವ ಜಾರ್ಜ್ ಜೋಸೆಫ್ ರವರಿಗೆ ಸೇರಿದ ಎಸ್ಟೇಟಿನ ಲೈನ್ ಮನೆಗೆ ಕರೆದುಕೊಂಡು ಹೋಗಿ ಬಾಲಕಿಯನ್ನು 1ನೇ ಆರೋಪಿ ತನ್ನೊಂದಿಗೆ ಇರಿಸಿಕೊಂಡಿದ್ದು, ಮಗಳು ಕಾಣೆಯಾದ ಬಗ್ಗೆ ತಂದೆ ತಾಯಿಯರು ಹುಡುಕಾಟ ನಡೆಸಿ ನಂತರ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರನ್ನು ಪಡೆದ ಸುಂಟಿಕೊಪ್ಪ ಪೊಲೀಸರು ನೊಂದ ಬಾಲಕಿಯನ್ನು 1ನೇ ಆರೋಪಿ ವಾಸಿಸುತ್ತಿದ್ದ ಲೈನ್ ಮನೆಯಿಂದ ವಶಕ್ಕೆ ಪಡೆದು, ತನಿಖೆ ಕೈಗೊಂಡ ಅಂದಿನ ಸೋಮವಾರಪೇಟೆ ವಿಭಾಗದ ಡಿ.ವೈ.ಎಸ್.ಪಿ. ಆರ್.ವಿ ಗಂಗಾಧರಪ್ಪರವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಅಲ್ಲದೆ 2ನೇ ಆರೋಪಿ ನೊಂದ ಬಾಲಕಿ ಅಪ್ರಾಪ್ತಳೆಂದು ಖಚಿತಪಡಿಸಿಕೊಳ್ಳದೆ ಮತ್ತು ಸೂಕ್ತ ದಾಖಲಾತಿಗಳನ್ನು ಪಡೆದುಕೊಳ್ಳದೆ 1ನೇ ಆರೋಪಿಗೆ ಕೃತ್ಯವೆಸಗಲು ಲಾಡ್ಜ್ ನ ರೂಮನ್ನು ನೀಡಿ ಸಹಕಾರ ನೀಡಿರುವುದು ತನಿಖೆಯಿಂದ ಸಾಬೀತಾದ ಕಾರಣ ಆರೋಪಿತರ ವಿರುದ್ಧ ಪೋಳ್ಳೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಎಸ್.ಸಿ./ಎಸ್.ಟಿ.(ದೌ) ತಡೆ ಕಾಯ್ದೆ ಅಡಿಯ ಅಪರಾಧಕ್ಕಾಗಿ ಸಂಪೂರ್ಣ ತನಿಖೆ ಕೈಗೊಂಡು, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆದಿದ್ದು ನ್ಯಾಯಾಧೀಶರಾದ ಶ್ರೀಮತಿ ಮಮ್ರಾಜ್ ಇವರು ತೀರ್ಪು ನೀಡುತ್ತ 1ನೇ ಆರೋಪಿಯು ಬಡ ಕುಟುಂಬದ, ಪರಿಶಿಷ್ಟ ಜಾತಿಗೆ ಸೇರಿದ ಮತ್ತು ಅಪ್ರಾಪ್ತ ನೊಂದ ಬಾಲಕಿಯನ್ನು ಪ್ರೀತಿಸುವಂತೆ ನಟಿಸಿ, ಆಕೆಯನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದು, 2ನೇ ಆರೋಪಿ ತನ್ನ ಜವಾಬ್ದಾರಿಯನ್ನು ನಿಭಾಯಿಸದೆ ಅಂದರೆ ತನ್ನ ವಸತಿಗೃಹಕ್ಕೆ ಬರುವ ವ್ಯಕ್ತಿಗಳ ದಾಖಲಾತಿಗಳನ್ನು ಪರಿಶೀಲಿಸದೆ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು 1ನೇ ಆರೋಪಿಗೆ ಅವಕಾಶ ಮಾಡಿಕೊಟ್ಟಿರುವುದು ಪ್ರಾಸಿಕ್ಯೂಷನ್ ಪರ ಹಾಜರು ಪಡಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿತರು ಮೇಲೆ ಹೇಳಿದ ಕೃತ್ಯವೆಸಗಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಮತ್ತು ಸಮಾಜದ ಶೋಷಿತ ವರ್ಗದ ಹೆಣ್ಣುಮಕ್ಕಳ ಅದರಲ್ಲೂ ಅಪ್ರಾಪ್ತ ವಯಸ್ಸಿನ ವಯಸ್ಕರಲ್ಲದ ಹೆಣ್ಣು ಮಕ್ಕಳ ರಕ್ಷಣೆ ವ್ಯವಸ್ಥೆಯ ಜವಾಬ್ದಾರಿ ಮತ್ತು ವಯಸ್ಕಳಲ್ಲದ ಕಿಶೋರಾವಸ್ಥೆಯ ನೊಂದ ಬಾಲಕಿಯ ಸಮ್ಮತಿಯು ಕಾನೂನಿನ ಪ್ರಕಾರ ನ್ಯಾಯವಾದ ಸಮ್ಮತಿಯಲ್ಲ ಎಂದು ಮತ್ತು ಇಂತಹ ಮನಸ್ಥಿತಿಯುಳ್ಳ ಆರೋಪಿತರು ಈ ರೀತಿಯ ಹೇಯ ಕೃತ್ಯದಲ್ಲಿ ಭಾಗವಹಿಸುವುದನ್ನು ತಡೆಯುವುದು ಇಂದಿನ ಅಗತ್ಯ ಎಂದು ತೀರ್ಮಾನಿಸಿ ಎರಡು ಜನ ಆರೋಪಿತರಿಗೆ ಪೋಕೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಒಟ್ಟು ತಲಾ 20 ವರ್ಷ ಕಠಿಣ ಶಿಕ್ಷೆ ಮತ್ತು 1ನೇ ಆರೋಪಿಗೆ ರೂ.1,60,000/- ದಂಡವನ್ನು ಮತ್ತು 2ನೇ ಆರೋಪಿಗೆ ರೂ.25,000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಮತ್ತು ನೊಂದ ಬಾಲಕಿಗೆ ನಿಯಮಾನುಸಾರ ಪರಿಹಾರವನ್ನು ಆದೇಶಿಸಿದ್ದು, ಸದರಿ ಪರಿಹಾರದ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರ ನೀಡುವಂತೆ ಆದೇಶಿಸಿರುತ್ತಾರೆ. ಮೇಲ್ಕಂಡ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಶ್ರೀ ದೇವೇಂದ್ರ ಎನ್.ಪಿ. ರವರು ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!