ಕುಶಾಲನಗರ, ಏ 11: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡು ಮಂಗಳೂರು ಗ್ರಾಮದ ನಿವಾಸಿಯಾಗಿ ಅಬ್ದುಲ್ ಗಫಾರ್ ಸಧ್ಯಕ್ಕೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಸೂಕ್ತ ನೆರವುಬೇಕಿದೆ. ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರುಗ ಸಂರಕ್ಷಕ, ಸಮಾಜ ಸೇವಕ ಅಬ್ದುಲ್ ಗಫಾರ್, ಕುಶಾಲನಗರ, ಕೂಡಿಗೆ, ಕೂಡುಮಂಗಳೂರು, ವ್ಯಾಪ್ತಿ ಮಾತ್ರವಲ್ಲದೆ, ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಅನೇಕರಿಗೆ ಉರಗ ಸಂರಕ್ಷಕರೆಂದು ಪರಿಚಿತನಾಗಿದ್ದೇನೆ. ಹಾಗೆಯೇ ಈ ಭಾಗಗಳಲ್ಲಿ ಎಲ್ಲಿಯೇ ಭಯ ಹುಟ್ಟಿಸುವ ಹಾವುಗಳು ಮನೆಗಳಲ್ಲಿ, ತಮ್ಮ ವಟಾರದಲ್ಲಿ ಕಾಣಿಸಿಕೊಂಡ ತಕ್ಷಣ ನನಗೆ ಸಂಪರ್ಕಿಸುತ್ತಾರೆ. ಎಂತಹ ವೇಳೆಯಲ್ಲಾದರೂ ನಾನು ಆ ಪ್ರದೇಶಕ್ಕೆ ಸೇರಿ ಅವರ ಭಯಗಳನ್ನು ನಿವಾರಣೆ ಮಾಡುತ್ತೇನೆ. ಅಲ್ಲಿ ಸಂರಕ್ಷಿಸಲ್ಪಟ್ಟ ಸಾವಿರಾರು ಹಾವುಗಳನ್ನು ಜೀವಂತವಾಗಿ ಸಮೀಪದ ಕಾಡಿಗೆ ಬಿಡುವ ಕೆಲಸವನ್ನು ಮಾಡಿದ್ದೇನೆ. ಇಂತಹ ಕಠಿಣ ಕೆಲಸವನ್ನು ಮಾಡುತ್ತಿದ್ದಾಗ ಸುಮಾರು ಐದು ಬಾರಿ ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿ, ಅದರಿಂದ ಪ್ರಾಣ ಉಳಿಸಿಕೊಂಡಿದ್ದೇನೆ.
ಆದರೆ ಇತ್ತೀಚಿಗೆ ಒಂದು ವರ್ಷದ ಹಿಂದೆ ಮತ್ತೊಮ್ಮೆ ನಾಗರಹಾವು ಕಚ್ಚಿದ ಪರಿಣಾಮ ಜಿಲ್ಲಾ ಕೇಂದ್ರವಾದ ಮಡಿಕೇರಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದೆ. ಪರಿಸ್ಥಿತಿ ಆ ಸಂದರ್ಭದಲ್ಲಿ ಆತಂಕ ಆದ ಹಿನ್ನೆಲೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ದಾಖಲಿಸಲು ,ನನ್ನ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿ, ಅಲ್ಲಿನ ವೈದ್ಯರ ಸೂಚನೆಗೆ ಮೈಸೂರಿನ ಜಯದೇವ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಸ್ವಲ್ಪ ಸುಧಾರಣೆಯಾದಂತೆ ಕಂಡಾಗ, ವೈದ್ಯರು ನನ್ನನ್ನು ಪರಿಶೀಲಿಸಿದ ನಂತರ, ಮಡಿಕೇರಿಯ ಆಸ್ಪತ್ರೆಯಲ್ಲಿ ಸ್ವಲ್ಪ ಕಾಲ ಅಬ್ಸರ್ವೇಷನ್ ಇದ್ದು ಮನೆಗೆ ಹೋಗಬಹುದು ಎಂದರು. ಮಡಿಕೇರಿಗೆ ಬಂದಾಗ ಅಲ್ಲಿನ ವೈದ್ಯರು ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ಪುನಹ ನಾನು ಮೈಸೂರಿನ ಆಸ್ಪತ್ರೆಗೆ ಬಂದು ಅಲ್ಲಿನ ವೈದ್ಯರನ್ನು ಕಂಡೆ, ನನ್ನನ್ನು ಕೇವಲ ಔಪಚಾರಿಕ ಪರೀಕ್ಷೆ ಮಾಡಿ, ಆರು ಗಂಟೆಗಳ ಕಾಲ ಇರಿಸಿಕೊಂಡು ಈಗ ನೀವು ಚೆನ್ನಾಗಿದ್ದೀರಿ ಮನೆಗೆ ಹೋಗಿ ಎಂದು ಕಳಿಸಿದರು. ಮನೆಗೆ ಬಂದ ಮೇಲೆ ನನಗೆ ಅಸಾಧ್ಯವಾದ ತಲೆನೋವು ಕಾಣಿಸಿಕೊಂಡು ತುಂಬಾ ನರಳಿದೆ. ನನ್ನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ, ಇತ್ತೀಚಿನವರೆಗೂ ಆ ಎಲ್ಲಾ ನೋವು ಸಹಿಸಿಕೊಂಡಿದ್ದೆ. ಕುಶಾಲನಗರದ ವೈದ್ಯರ ಬಳಿ ಹೋಗಿ ಅಲ್ಲಿ ಅವರು ಕೊಟ್ಟ ಸಲಹೆಯಂತೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಿದೆ. ಅದರಲ್ಲಿ ನನಗೆ ಬ್ರೈನ್ ಟ್ಯೂಮರ್ ಇದೆ ಎಂಬ ಲ್ಯಾಬ್ ವರದಿ ಬಂದಿದೆ. ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈಗ ಒಂದು ವರ್ಷದಿಂದ ಸರಿಯಾದ ಚಿಕಿತ್ಸೆ ಇಲ್ಲದೇ, ವೈದ್ಯರ ನಿರ್ಲಕ್ಷ, ನನಗೆ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ನರಳುತಿದ್ದೇನೆ. ನನ್ನ ಕುಟುಂಬಕ್ಕೆ ನಾನೇ ಆಸರೆಯಾಗಿದ್ದು , ಸಮಾಜ ಸೇವಕನಾಗಿ, ಪರಿಸರ ಸಂರಕ್ಷಕನಾಗಿ ಅಳಿಲು ಸೇವೆ ಮಾಡುತ್ತಿದ್ದ ನನಗೆ ಉತ್ತಮ ಚಿಕಿತ್ಸೆ ಬೇಕಾಗಿದೆ. ಜಿಲ್ಲಾ ಯಂತ್ರಾಂಗ,ಅಥವಾ ಸಂಘ ಸಂಸ್ಥೆಗಳು ಯಾವುದೇ ರೂಪದಲ್ಲಿ ನನಗೆ ಆಸರೆಯಾಗಬೇಕಿದೆ ಎಂದರು. ಸಹಾಯ ಮಾಡಲು ಇಚ್ಛಿಸುವವರು: 9900371001. ಸಂಖ್ಯೆಗೆ ಸಂಪರ್ಕಿಸಿ.
Back to top button
error: Content is protected !!