ಸುದ್ದಿಗೋಷ್ಠಿ

ನೆರವೇರದ ಸಿಎಂ‌ ಭರವಸೆ: ಮಾದಾಪಟ್ಟಣ ಸಂತ್ರಸ್ಥ ಕುಟುಂಬದ ಅಳಲು

ಕುಶಾಲನಗರ, ಫೆ 19: ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಜೂನ್ ತಿಂಗಳಲ್ಲಿ ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಸ ಮನೆ ನಿರ್ಮಿಸಿಕೊಡುತ್ತೇವೆ ಎಂದು ನೀಡಿದ ಭರವಸೆ ಏಳು ತಿಂಗಳಾದರೂ ಇದುವರೆಗೆ ಈಡೇರಿಲ್ಲ ಎಂದು ಸಂತ್ರಸ್ತರಾದ ಬಿ.ಎಸ್.ಬಸವರಾಜು ಮತ್ತು ಕುಟುಂಬಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಯಾದ ಮಳೆಯಿಂದ ನಮ್ಮ ಮನೆ ಸಂಪೂರ್ಣ ಹಾನಿಯಾಯಿತು. ಆ ತಿಂಗಳಲ್ಲಿ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು, ಅಧಿಕಾರಿಗಳು ಬಂದು ಮನೆ ಪರಿಶೀಲನೆ ಮಾಡಿ ಸಾಂತ್ವನ ಹೇಳಿದರು. ನೀವು ಚಿಂತಿಸಬೇಡಿ ನಿಮಗೆ ವಾಸಿಸಲು ಯೋಗ್ಯವಾದ ಹೊಸ ಮನೆ ನಿರ್ಮಿಸಿ‌ಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಆರೇಳು ತಿಂಗಳು ಕಳೆದರೂ ಮನೆ ನಿರ್ಮಾಣಗೊಂಡಿಲ್ಲ.ಇದುವರೆಗೆ ಕೇವಲ ರೂ.1.20 ಲಕ್ಷ ಅನುದಾನ ನೀಡಲಾಗಿದೆ.ಈ ಹಣದೊಂದಿಗೆ ಸಾಲ ಮಾಡಿ ರೂ.1.60 ಲಕ್ಷ ವೆಚ್ಚದಲ್ಲಿ ಫೌಂಡೇಷನ್ ನಿರ್ಮಾಣ ಮಾಡಿದ್ದೇವೆ. ಆದರೂ ಮನೆ ಮೇಲೆ ಏಳಲೇ ಇಲ್ಲ. ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ.ಆದರೆ ಅವರು ಭರವಸೆ ನೀಡಿದರೆ ಹೊರತು ಈ ಬಡ ಕುಟುಂಬಕ್ಕೆ ವಸತಿ ಭಾಗ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮಗೆ ವಾಸಿಸಲು ಮನೆಯಿಲ್ಲ.ಬಾಡಿಗೆ ಮನೆಯಲ್ಲಿ ಸಧ್ಯಕ್ಕೆ ವಾಸ ಮಾಡುತ್ತಿದ್ದೇವೆ.ನಾವು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ.ಪ್ರತಿ ತಿಂಗಳು ರೂ.5 ಸಾವಿರ ಬಾಡಿಗೆ ಹಣ ಕಟ್ಟಬೇಕು.ಜೊತೆಗೆ ಸಾಲ ಮಾಡಿ ಫೌಂಡೇಷನ್ ಮಾಡಿದ್ದೇವೆ.ಸಾಲಗಾರರ ಜೊತೆಗೆ ಬಾಡಿಗೆ ಮನೆ ಹಣ ಕಟ್ಟಬೇಕು.ಸರ್ಕಾರದ ವತಿಯಿಂದ ಬಂದಿದ್ದ ರೂ.1.20 ಲಕ್ಷ ಹಣ ಬಹುತೇಕ ಬಾಡಿಗೆಗೆ ಆಗಿದೆ ಎಂದು ಸಂತ್ರಸ್ತೆ ಸುಶೀಲ ನೊಂದು ನುಡಿದರು.

ಪಂಚಾಯಿತಿ ಅಧಿಕಾರಿಗಳು ಫೌಂಡೇಷನ್ ಜಿಪಿಎಸ್ ಮಾಡಿದ್ದು,ನೀವು ಗೋಡೆ ಕಟ್ಟಿ ಹಣ ಬರುತ್ತೆ ಎಂದು ಹೇಳುತ್ತಿದ್ದಾರೆ.ಆದರೆ ನಾವು ಕೂಲಿ ಮಾಡಿ‌ಜೀವನ ಸಾಗಿಸುತ್ತಿದ್ದು,ಸ್ವಂತವಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ.ಆದ್ದರಿಂದ ಸರ್ಕಾರ ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು.ಆದಷ್ಟು ಬೇಗ ಮನೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರಾಜೇಶ್ ಹಾಗೂ ರಾಧಾ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!