ಪ್ರತಿಭಟನೆ

ದಲಿತ ಸಂಘರ್ಷ ಸಮಿತಿ, ಆರ್.ಪಿ.ಐ. ಪಕ್ಷದಿಂದ ಪ್ರತಿಭಟನೆ

ಕುಶಾಲನಗರ ಏ 16: ಸರಕಾರಿ ಭೂಮಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಪಕ್ಷದ ವತಿಯಿಂದ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಲಾಯಿತು.

ಸರಕಾರ ಜಾರಿಗೆ ತಂದಿರುವ ಭೂ ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ಮತ್ತು ಸುತ್ತೋಲೆ ರದ್ದುಪಡಿಸಬೇಕು, ಜಿಲ್ಲೆಯಲ್ಲಿ ಕಾರ್ಪೊರೇಟ್ ಗಳು, ಭಾರೀ ಭೂ‌ಮಾಲೀಕರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯನ್ನು ತೆರವು ಗೊಳಿಸಿ ಬಡವರಿಗೆ ಹಂಚಬೇಕು,‌ ಭೂ ರಹಿತ ಕೃಷಿಕರು,‌ಕಾರ್ಮಿಕರು, ದಲಿತರು ಸೇರಿದಂತೆ ಎಲ್ಲಾ ವರ್ಗದವರಿಗೆ ನಿವೇಶನ ಮತ್ತು ಭೂಮಿ ಹಂಚಬೇಕು, ಅಕ್ರಮ ಸಕ್ರಮ ಸಮಿತಿ 57 ರಲ್ಲಿ ಸಲ್ಲಿಕೆ ಅಗಿರುವ ಬಡವರ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಿ, ಅರ್ಜಿ ಸಲ್ಲಿಸಲು ಕಾಲಾವಕಾಶ ಮುಂದುವರೆಸಬೇಕು, ಎಲ್ಲಾ ವರ್ಗದವರು ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿಯನ್ನು ಐದು ಎಕರೆಗೆ ಹಕ್ಕುಪತ್ರ ವಿತರಿಸಬೇಕು, ಜಿಲ್ಲೆಯ ಎಲ್ಲಾ 5 ತಾಲೂಕುಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ‌ ತಹಸೀಲ್ದಾರ್ ಕಛೇರಿ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಮಿತಿ ಪ್ರಮುಖರಾದ ಎಸ್.ಕೆ.ಸ್ವಾಮಿ, ಪ್ರಕಾಶ್, ಸಂಗಮೇಶ್, ಕಾಳ, ಸುರೇಶ್ ಕುಮಾರ್, ಮಂಜುನಾಥ್, ಮುತ್ತಣ್ಣ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!