ಕುಶಾಲನಗರ, ಮಾ 10: ಕೊಣನೂರು – ಶಿರಂಗಾಲ ಮುಖ್ಯ ರಸ್ತೆ ಬಳಿಯಿಂದ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು.
ಬಸವಾಪಟ್ಟಣದ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ನಿರ್ಮಿಸಿರುವ ಮಹಾದ್ವಾರ ಹಾಗೂ ಗೋಪುರವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬಸವಾಪಟ್ಟಣ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ಸುಮಾರು ರೂ. 16 ಲಕ್ಷ ವೆಚ್ಚದಲ್ಲಿ ಸುಂದರವಾದ ಮಹಾದ್ವಾರವನ್ನು ನಿರ್ಮಾಣ ಮಾಡಿದ್ದು, ಇದು ದೇವಾಲಯದ ಮೆರುಗನ್ನು ಹೆಚ್ಚಿಸಿದೆ. ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಭಕ್ತರು ತಮ್ಮ ತನುಧನ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ಶಿರಂಗಾಲ ಗ್ರಾಮದ ದೇವತೆ ಶ್ರೀ ಮಂಟಿಗಮ್ಮ ದೇವಿಯ ಜಾತ್ರೋತ್ಸವ ಒಂದು ವಾರಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.ಈ ಹಬ್ಬಕ್ಕೆ ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು, ಹಾಸನ ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಜನರು ಸೇರಿದಂತೆ 30 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜೊತೆಗೆ ಪ್ರತಿನಿತ್ಯ ದಾನಿಗಳಿಂದ ಅನ್ನ ದಾಸೋಹ ನಡೆಯುತ್ತದೆ. ನಾಡಿನ ಜನರಿಗೆ, ರೈತರಿಗೆ ತಾಯಿ ಒಳಿತು ಮಾಡಲಿ.ಮಳೆ ಬೆಳೆ ಸುಭೀಕ್ಷವಾಗಿ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ಎರಡು ವಷಗಳಿಗೊಮ್ಮೆ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ಹಬ್ಬ ನಡೆಯುತ್ತದೆ. ಈ ಬಾರಿಯ ಮಂಟಿಗಮ್ಮ ಹಬ್ಬ ಮಾರ್ಚ್ 14 ರಿಂದ 19 ರ ತನಕ ವಿಜೃಂಭಣೆಯಿಂದ ಜರುಗಲಿದ್ದು ಇಂದಿನಿಂದ ಮೀಸಲು ಪೂಜಾ ಕಾರ್ಯಕ್ರಮ ಆರಂಭಗೊಂಡಿವೆ.
ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ದಾನಿಗಳಿಂದ ದೇವಿ ಆರಾಧನೆ ಅದ್ದೂರಿಯಾಗಿ ನಡೆಯುತ್ತದೆ. ಇಂದು ಸ್ವಾಮೀಜಿ ನೇತೃತ್ವದಲ್ಲಿ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಗಂಗೆಪೂಜೆ ಹಾಗೂ ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ದೇವಾಲಯದಲ್ಲಿ ಹೋಮಹವನ ನಡೆಯುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ದೇವಾಲಯ ಸಮಿತಿ ಗೌರವಾಧ್ಯಕ್ಷ
ಎಸ್.ಆರ್.ಕಾಳಿಂಗಪ್ಪ,ಕಾರ್ಯದರ್ಶಿ ಎಂ.ಎಸ್.ಗಣೇಶ್,
ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಸನ್ನ,ಉಪಾಧ್ಯಕ್ಷ
ಉಮೇಶ್,ಕಾರ್ಯದರ್ಶಿ ಬಸವಣಯ್ಯ,
ಗ್ರಾಮ ಪಂಚಾಯತಿ ಉಪಾಧ್ಯಕ್ಷ
ಎಚ್.ಎಸ್.ಬಸವರಾಜು ಮುಖಂಡರಾದ ಸಿ.ಎಲ್.ಲೋಕೇಶ್, ಚೇತನ್,ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!