ಕ್ರೀಡೆ

ದಿಡ್ಡಳ್ಳಿ ಪುನರ್ವಸತಿ ಶಿಬಿರಕ್ಕೆ 10 ವರ್ಷ: ಹಾಡಿ ಹಬ್ಬ: ಕ್ರೀಡಾಕೂಟ ಉದ್ಘಾಟಿಸಿದ ಶಾಸಕರು

ಕುಶಾಲನಗರ, ಜ 24:ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗುವಂತೆ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.

ದಿಡ್ಡಳ್ಳಿಯಿಂದ ನಿರಾಶ್ರಿತರಾದ ಅರಣ್ಯವಾಸಿಗಳು
ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ ನೆಲೆಕಂಡು 10 ವರ್ಷ ಸಂದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಹಾಡಿ ಹಬ್ಬದ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಆರೋಗ್ಯದಿಂದ ಇದ್ದಾಗ ಮಾತ್ರ ಸಮಾಜಕ್ಕಾಗಿ ದುಡಿಯಲು ಸಾಧ್ಯ. ಇದಕ್ಕಾಗಿ ಆರೋಗ್ಯ ವೃದ್ದಿಸುವ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ಅಂತೆಯೇ ಸ್ವಚ್ಚತೆ, ಸುಂದರ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಈ ಪುನರ್ವಸತಿ ಶಿಬಿರದಲ್ಲಿ ಶಾಶ್ವತ ಕ್ರೀಡಾಂಗಣ ಸೇರಿದಂತೆ ಕೇಂದ್ರದ ಸರ್ವಾಂಗೀಣ ಅಭಿವೃದ್ದಿಗೆ ಕ್ರಮವಹಿಸಲಾಗುವುದು ಎಂದರು.

ಕೂಡಿಗೆ ಗ್ರಾಪಂ ಸದಸ್ಯ ಟಿ.ಪಿ.ಹಮೀದ್ ಮಾತನಾಡಿ, ಈಗಾಗಲೆ ಈ ಕೇಂದ್ರದಲ್ಲಿ ರಸ್ತೆ ಅಭಿವೃದ್ದಿಗೆ ಶಾಸಕರು 1.30 ಕೋಟಿ ಅನುದಾನ ಈಗಾಗಲೆ ಒದಗಿಸಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಸಮುದಾಯ ಭವನ ನಿರ್ಮಾಣಕ್ಕೆ ಕೂಡ ಪ್ರಸ್ತಾವನೆ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಲಿದೆ. ಇದರೊಂದಿಗೆ ಯುಜಿಡಿ ಸಮಸ್ಯೆ ನಿವಾರಣೆಗೆ ಶಾಸಕರು ಕ್ರಮವಹಿಸಲಿದ್ದಾರೆ ಎಂದು ತಿಳಿಸಿದರು.

ಹಾಡಿ ಹಬ್ಬದ ಅಂಗವಾಗಿ ಕ್ರೀಡೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ರೈತ ಮುಖಂಡ ನಿರ್ವಾಣಪ್ಪ ಸೇರಿದಂತೆ ಹಾಡಿ ಮುಖಂಡರು, ನಿವಾಸಿಗಳು ಕ್ರೀಡಾಕೂಟ ಆಯೋಜಕರು, ಕ್ರೀಡಾಪಟುಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!