ಕುಶಾಲನಗರ, ಜೂ 17: ಹೊಸ ತಂಡವೊಂದು ನಿರ್ಮಿಸಿ ನಿರ್ದೇಶಿಸಿ ತಯಾರಿಸಿರುವ ಸಂಭವಾಮಿ ಯುಗೇ ಯುಗೇ ಚಲನಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಾಗಿ ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ.
ಕುಶಾಲನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಅವರು, ಗ್ರಾಮೀಣ ಸಿಗಡಿನ ಚಿತ್ರ ಇದಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವ ಭರವಸೆಯಿದೆ. ಕಣ್ಣು ಕಾಣದ ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ. ಕುಶಾಲನಗರದ ಪ್ರತಿಭೆ ಮಧುರಗೌಡ ಎಂಬವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ ಎಂದು ತಿಳಿಸಿದರು.
ಕುಟುಂಬ ಸಮೇತವಾಗಿ ನೋಡಬಹುದಾದ ಹಳ್ಳಿಗಾಡಿನ ಕಥೆ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಾಯಕ ನಟ ಜೈಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಹೊಸಬರು ಎನ್ನುವುದಕ್ಕಿಂತ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡುವ ಮೂಲಕ ಕನ್ನಡ ಚಿತ್ರರಂಗದ ಉಳಿವಿಗೆ ಸಹಕರಿಸಿ. ಇದೊಂದೂ ಪಕ್ಕ ಕಮರ್ಷಿಯಲ್, ಮಾಸ್ ಮೂವಿ. ಚಿತ್ರ ನೋಡಿ, ಹೊಸ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ನಾಯಕಿ ನಟಿ ಕುಶಾಲನಗರದ ಮಧುರಗೌಡ ಮಾತನಾಡಿ, ನಾನು ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವಿದ್ದರು, ಚಿತ್ರರಂಗ ನನಗೆ ಹೊಸದ್ದು. ಈ ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಗ್ರಾಮೀಣ ಭಾಗದ ಮುಗ್ದ ಹುಡುಗಿಯ ಪ್ರಮುಖ ಪಾತ್ರ ನನ್ನದು ಎನ್ನುವ ಖುಷಿಯನ್ನು ಹಂಚಿಕೊಂಡರು. ಎಲ್ಲರೂ ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸಿ ಶುಭಹಾರೈಸುವಂತೆ ಕೋರಿದರು.
ಪೊಲೀಸ್ ಪಾತ್ರಧಾರಿ ವೆಂಕಟೇಶ್ ಪ್ರಸಾದ್, ವಿಲನ್ ಪಾತ್ರಧಾರಿ ಅಭಯ್ ಪುನಿತ್, ಮತ್ತೋರ್ವ ನಾಯಕಿ ನಿಶಾ ರಜಪೂತ್ ಮಾತನಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭ ಚಿತ್ರದ ಡಿಒಪಿ ರಾಜು ಹೆಮ್ಮಿಗೆಪುರ ಮತ್ತಿತರರು ಇದ್ದರು.
Back to top button
error: Content is protected !!