ಕಾರ್ಯಕ್ರಮ
ಆಯುಷ್ಮಾನ್ ದಿವಸ 5 ನೇ ವರ್ಷದ ಸಂಭ್ರಮಾಚರಣೆ

ಕುಶಾಲನಗರ ಸೆ 26: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಆಯುಷ್ಮಾನ್ ದಿವಸ 5 ನೇ ವರ್ಷದ ಸಂಭ್ರಮಾಚರಣೆ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಕೆ.ಬಿ.ಕಾರ್ಯಪ್ಪ ಅವರು ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಾ ಆಸ್ಪತ್ರೆಗೆ ಬರುವ ಶೇಕಡ 90 ರಷ್ಟು ರೋಗಿಗಳನ್ನು ಈ ಯೋಜನೆಯೊಳಗೆ ಒಳಪಡಿಸಲು ಪ್ರಯತ್ನಿಸಲಾಗುತಿದ್ದು, ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವಾಗ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಕಾರ್ಡ್, ಆಧಾರ್ ಕಾರ್ಡ್, ತಂದಲ್ಲಿ ಯೋಜನೆಯನ್ನು ಶೇ.100 ರಷ್ಟು ಒದಗಿಸಲು ಸಾದ್ಯವಾಗಲಿದೆ ಎಂದು ತಿಳಿಸಿದರು. ಈಗಾಗಲೇ ರೋಗಿಗಳನ್ನು ರೆಫರಲ್ ಮಾಡುವುದು ಕಡಿಮೆಯಾಗಿದ್ದು ಸಂಸ್ಥೆಯಲ್ಲಿಯೇ ಅತ್ಯಾಧುನಿಕ ಉಪಕರಣ ಸೇರಿದಂತೆ ಹೆಚ್ಚಿನ ಸರ್ಜರಿ ಹಾಗೂ ಚಿಕಿತ್ಸೆಗಳು ದೊರೆಯುತ್ತಿದ್ದು ಎಲ್ಲಾ ಸಾರ್ವಜನಿಕರು ಯೋಜನೆಯ ಪ್ರಯೋಜನೆವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ವ್ಯೆದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್ ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಏಳು ಬೀಳುಗಳು ಹಾಗೂ ಯೋಜನೆಯ ತ್ವರಿತಗತಿ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,
ಆಸ್ಪತ್ರೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೋಡಲ್ ಅಧಿಕಾರಿ ಡಾ.ಸತೀಶ್ ವಿ. ಎಸ್. ಮಾತನಾಡಿ, ವಾಜಪೇಯಿ ಆರೋಗ್ಯಶ್ರೀ ಯೋಜನೆಯಿಂದ, ಆರೋಗ್ಯ ಕರ್ನಾಟಕ ಯೋಜನೆ, ಅಲ್ಲಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಾಗಿ ನಡೆದು ಬಂದ ರೀತಿ, ಹಾಗೂ ಯೋಜನೆಯಲ್ಲಿ 2018 ರಲ್ಲಿ ಸರಾಸರಿ ತಿಂಗಳಿಗೆ 50 ಜನರನ್ನು ಯೋಜನೆಯಲ್ಲಿ ನೋಂದಣಿ ಮಾಡಿ ಉಚಿತ ಚಿಕಿತ್ಸೆ ನೀಡಿರುವುದು ಹಾಗೂ ಪ್ರಸ್ತುತ ತಿಂಗಳಿಗೆ ಸಂಸ್ಥೆಯಲ್ಲಿ ಸರಾಸರಿ 3500 ರಿಂದ 4000 ರೋಗಿಗಳಿಗೆ ಯೋಜನೆಯ ಮುಖಾಂತರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಆಸ್ಪತ್ರೆಗೆ ಬರುವ ರೋಗಿಯನ್ನು ಯಾವುದಾದರೂ ಒಂದು ಸರ್ಕಾರದ ಆರೋಗ್ಯ ಯೋಜನೆಗೆ ಒಳಪಡಿಸಿ ರೋಗಿಗೆ ಪರಿಪೂರ್ಣವಾದ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಸಂಸ್ಥೆಯ ಕರ್ತವ್ಯವಾಗಿದ್ದು ಅದನ್ನು ಡೀನ್ ಮತ್ತು ನಿರ್ದೇಶಕರ ಮತ್ತು ವೈದ್ಯಕೀಯ ಅಧೀಕ್ಷಕರ ಮಾರ್ಗದರ್ಶನದಲ್ಲಿ ರೋಗಿಗಳಿಗೆ ಯಾವುದೇ ಅನಾನುಕೂಲವಾಗದಂತೆ ನಿರ್ವಹಿಸಿಕೊಂಡು ಬರಲಾಗುತ್ತಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ 1352 ಚಿಕಿತ್ಸೆಗಳನ್ನು ಈ ಯೋಜನೆಯ ಮುಖಾಂತರ ಒದಗಿಸಲಾಗುತ್ತಿದ್ದು ಜನರಲ್ ಸರ್ಜರಿ ವಿಭಾಗದಲ್ಲಿ 199, ಜನರಲ್ ಮೆಡಿಸಿನ್ ನಲ್ಲಿ 247, ಮಕ್ಕಳ ವಿಬಾಗದಲ್ಲಿ 434, ಕೀಲು ಮತ್ತು ಮೂಳೆ ವಿಭಾಗದಲ್ಲಿ 119, ಕಿವಿ ಮೂಗು ಗಂಟಲು ವಿಭಾಗದಲ್ಲಿ 103, ಸ್ತ್ರೀ ಮತ್ತು ಪ್ರಸೂತಿ ರೋಗ ವಿಭಾಗದಲ್ಲಿ 66, ಮನೋಶಾಸ್ತ್ರ ವಿಭಾಗದಲ್ಲಿ 64, ಕಣ್ಣಿನ ಭಾಗದಲ್ಲಿ 33 ವಿವಿಧ ಬಗೆಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಶುಶ್ರೂಷಕ ಅಧೀಕ್ಷಕರು, ಯೋಜನೆಯ ಪಲಾನುಭವಿಗಳು, ವ್ಯೆದ್ಯರು, ನರ್ಸಿಂಗ್ ಆಫೀಸರ್ ಗಳು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸಿಬ್ಬಂದಿಗಳು, ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು, ಸುವರ್ಣ ಆರೋಗ್ಯ ಟ್ರಸ್ಟ್ ಜಿಲ್ಲಾ ಸಂಯೋಜಕರು, ಆರೋಗ್ಯ ಮಿತ್ರರು ಭಾಗವಹಿಸಿದ್ದರು.



