ಕುಶಾಲನಗರ, ಏ 21: ಕುಶಾಲನಗರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಜಂಟಿಯಾಗಿ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತ ಪ್ರಚಾರ ಕಾರ್ಯ ಆರಂಭಿಸಲಾಯಿತು.
ಬೈಚನಹಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಭಿಷೇಕ, ಪುಷ್ಪಾರ್ಚನೆ ಮಾಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ದೇಶದ ಪ್ರಜೆಗಳನ್ನು ತನ್ನ ಪರಿವಾರದಂತೆ ಕಾಣುವ, ದಿನದಲ್ಲಿ 15 ಗಂಟೆ ಕೆಲಸ ನಿರ್ವಹಿಸುವ ಮೋದಿಯಂತಹ ವ್ಯಕ್ತಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ ಮಿತ್ರ ಪಕ್ಷದೊಡನೆ ಮಹಾ ಪ್ರಚಾರ ಅಭಿಯಾನ ಆರಂಭಿಸಲಾಗಿದೆ. ಈ ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರು ಪ್ರಜೆಗಳ ಸೇವೆಗೆ ಹೆಸರಾದ ರಾಜಮನೆತನದವರಾಗಿದ್ದು ಅವರ ಗೆಲುವು ಕೂಡ ಪ್ರಜೆಗಳಿಗೆ ಅಗತ್ಯವಿದೆ ಎಂದರು.
ನಗರ ಜೆಡಿಎಸ್ ಅಧ್ಯಕ್ಷ ಚಂದ್ರು ಮಾತನಾಡಿ, ತನ್ನ ವಿಶೇಷ ನಿರ್ಣಯಗಳು, ಜನಪರ ಯೋಜನೆ, ಅಭಿವೃದ್ದಿಗಳಿಂದ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದಂತಹ ಪ್ರಬುದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು.ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಇಚ್ಚೆಯಂತೆ ಎರಡೂ ಪಕ್ಷದವರು ಸಹೋದರರಂತೆ ಈ ಚುನಾವಣೆಯ ಗೆಲುವಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಬಿಜೆಪಿ ಮುಖಂಡ, ಪುರಸಭಾ ಸದಸ್ಯ ಅಮೃತ್ ರಾಜ್ ಮಾತನಾಡಿದರು. ಕಾಂಗ್ರೆಸ್ ನವರು ಅಸಾಧ್ಯವಾದ ಭರವಸೆಗಳನ್ನು ನೀಡುವ ಮೂಲಕ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಕನಿಷ್ಠ ಸ್ಥಾನಗಳನ್ನು ಪಡೆಯುವ ಮೂಲಕ ಅವರ ಭರವಸೆಯನ್ನು ಈಡೇರಿಸಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಪಕ್ಷವನ್ನು ಕಿತ್ತೊಗೆಯಬೇಕಿದೆ ಎಂದರು.
ಈ ಸಂದರ್ಭ ಬಿಜೆಪಿ ಜೆಡಿಎಸ್ ಪಕ್ಷದ ಪ್ರಮುಖರಾದ ಗೌತಮ್, ಬಿ.ಎಲ್.ಜಗದೀಶ್, ಎಂ.ಡಿ.ಕೃಷ್ಣಪ್ಪ, ಎಚ್.ಎಸ್.ಅಶೋಕ್, ಮಧುಸೂದನ್, ಎಂ.ಬಿ.ಸುರೇಶ್, ಪುಂಡರೀಕಾಕ್ಷ, ಗಣಪತಿ, ಶಿವಕುಮಾರ್, ಚಿಣ್ಣಪ್ಪ, ಸರಳ, ವಿನೀತ್, ಶ್ರೀಕಾಂತ್, ಸಂತೋಷ್, ಮನೋಜ್, ವಿನಾಯಕ, ಗಣೇಶ್, ಯಲ್ಲಪ್ಪ, ಮಂಜು, ಪ್ರಸನ್ನ, ಅಭಿಷೇಕ್ ಮತ್ತಿತರರು ಇದ್ದರು.
Back to top button
error: Content is protected !!