ಕುಶಾಲನಗರ, ಡಿ .03: ಕಪ್ಪೆ ನುಂಗಲು ಬಂದ ನಾಗರಹಾವು ಗಾಣಕ್ಕೆ ಸಿಲುಕಿ ನರಳಾಡಿದ ಘಟನೆ ಕುಶಾಲನಗರದ ಹಾರಂಗಿಯಲ್ಲಿ ಸೆಪ್ಟೆಂಬರ್ 30 ರಂದು ನಡೆದಿತ್ತು.
ಈ ಹಾವನ್ನು ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿತ್ತು. ಎರಡು ತಿಂಗಳ ಯಶಸ್ವಿ ಚಿಕಿತ್ಸೆ ಬಳಿಕ ಇದೀಗ ಹಾವು ಸಂಪೂರ್ಣ ಗುಣಮುಖವಾಗಿದೆ.
ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ಮೆಹಬೂಬ್ ಸಾಬ್ ಮೀನು ಹಿಡಿಯಲೆಂದು ಗಾಣಕ್ಕೆ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು. ಆದರೆ ಮೀನು ಸಿಲುಕದ ಕಾರಣ ಕಪ್ಪೆ ಸಹಿತ ಗಾಣವನ್ನು ತಂದು ಮನೆಯಂಗಳದಲ್ಲಿ ಇಡಲಾಗಿತ್ತು. ಮನೆಯ ಪ್ರದೇಶದಲ್ಲಿ ಕೆಲ ದಿನಗಳಿಂದ ಅಡ್ಡಾಡುತ್ತಿದ್ದ ನಾಗರಹಾವೊಂದು ಕಪ್ಪೆ ನುಂಗಲು ಬಂದಿದೆ. ಅಪಾಯ ಅರಿಯದೆ ಕಪ್ಪೆ ನುಂಗಿದ ನಾಗರಹಾವಿನ ಗಂಟಲಿಗೆ ಗಾಣ ಸಿಲುಕಿಕೊಂಡಿದೆ. ನಾಗರಹಾವು ಒದ್ದಾಡಿತ್ತಿರುವುದನ್ನು ಗಮನಿಸಿದ ಮನೆ ಮಾಲೀಕ ಸ್ನೇಕ್ ಗಫೂರ್ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ನೇಕ್ ಗಫೂರ್ ಕೂಡ ಹಾವಿನ ಬಾಯಿಯಿಂದ ಗಾಣ ತೆಗೆಯಲು ಶ್ರಮಿಸಿ ಸಾಧ್ಯವಾಗಲಿಲ್ಲ. ಸ್ನೇಕ್ ವಾವ ಸೇರಿದಂತೆ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಲಾಗಿ ಹಾವಿಗೆ ಚಿಕಿತ್ಸೆ ನೀಡಲು ಕೊಡಗಿನಲ್ಲಿ ಸೂಕ್ತ ಸೌಲಭ್ಯ ಇಲ್ಲಸಿರುವ ಬಗ್ಗೆ ಅಸಹಾಯಕತೆ ವ್ಯಕ್ತಗೊಂಡಿದೆ.ಬಳಿಕ ಮೈಸೂರಿನ ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ಬಳಿಕ ಮೈಸೂರಿನಲ್ಲಿ ಚಿಕಿತ್ಸೆಗೆ ಅವಕಾಶವಿರುವುದು ತಿಳಿದುಬಂದಿತ್ತು. ಹೀಗಾಗಿ 4 ವರ್ಷ ಪ್ರಾಯದ 5 ಅಡಿ ಉದ್ದದ ಈ ನಾಗರಹಾವನ್ನು ಐರಾವತ ಬಸ್ ನಲ್ಲಿ ಮೈಸೂರಿಗೆ ಸ್ನೇಕ್ ಗಫೂರ್ ಕಳುಹಿಸಿಕೊಟ್ಟಿದ್ದರು. ಅಲ್ಲಿ ಸೂರ್ಯಕೀರ್ತಿ ಅವರ ನೇತೃತ್ವದಲ್ಲಿ ಡಾ.ಅಭಿಲಾಷ್ ಅವರು ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ. ಎಕ್ಸರೆ ಮೂಲಕ ಗಾಣ ಹೊಟ್ಟೆಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಂಡು ವೈದ್ಯಕೀಯ ಶಾಸ್ತ್ರದ ಪ್ರಕಾರ ಹಾವಿನ ಗುದದಿಂದ ಗಾಣವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಣದೊಂದಿಗೆ ನುಂಗಿದ್ದ ಕಪ್ಪೆ ಹೊಟ್ಟೆಯಲ್ಲಿ ಜೀರ್ಣವಾಗಿದೆ. ಆದರೆ ಗಾಣ ಮಾತ್ರ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು. ಇದೊಂದು ಅಪರೂಪದ ಘಟನೆ ಎಂದು ತಿಳಿಸಿರುವ ಸೂರ್ಯಕೀರ್ತಿ ಅವರು ಶನಿವಾರ ಹಾವನ್ನು ಕುಶಾಲನಗರಕ್ಕೆ ತಂದು ಯಡವನಾಡು ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಸಂದರ್ಭ ಉರಗ ರಕ್ಷಕರಾದ ಕೂಡಿಗೆಯ ಸ್ನೇಕ್ ಗಫೂರ್, ಸೋಮವಾರಪೇಟೆಯ ಸ್ನೇಕ್ ರಘು ಇದ್ದರು.
Back to top button
error: Content is protected !!