ಪ್ರತಿಭಟನೆ
ಹೆಬ್ಬಾಲೆ ಗ್ರಾಪಂ ಅವ್ಯವಸ್ಥೆ ಖಂಡಿಸಿ ಗ್ರಾಪಂ ಮುಂಭಾಗ ಕರವೇ ಪ್ರತಿಭಟನೆ

ಕುಶಾಲನಗರ, ನ 28: (ಕುಶಲವಾಣಿ) ಹೆಬ್ಬಾಲೆ ಗ್ರಾಮದ ಸಂತೆ ಪ್ರಾಂಗಣದಲ್ಲಿನ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆ ಖಂಡಿಸಿ ಗ್ರಾಪಂ ಮುಂಭಾಗ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಗ್ರಾಪಂ ಸುತ್ತಮುತ್ತ ಕಾಡು ದಟ್ಟವಾಗಿದೆ. ಕಟ್ಟಡಕ್ಕೆ ಸುಣ್ಣಬಣ್ಣ ಬಳಿದಿಲ್ಲ, ಸ್ವಚ್ಚತೆ ಮರೆತಿದ್ದಾರೆ, ದ್ವಜಸ್ಥಂಭ ಕೆಳಗೆ ಕಸದ ರಾಶಿ ತಾಂಡವವಾಡುತ್ತಿದ್ದು ರಾಷ್ಟ ಧ್ವಜಕ್ಕೆ ಅಪಮಾನ ಮಾಡಲಾಗಿದೆ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಕರವೇ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ಇಒ, ಪಿಡಿಒ ಆಗಮಿಸಿ ಅಹವಾಲು ಸ್ವೀಕರಿಸುವಂತೆ ಆಗ್ರಹಿಸಿ ಗ್ರಾಪಂ ಮುಂಭಾಗ ಧರಣಿ ಕೂರಲಾಯಿತು.



