ಕುಶಾಲನಗರ, ಅ 05: ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಜೂನಿಯರ್ ಕಾಲೇಜಿನ 10ನೇ ತರಗತಿಯ 1990-91 ನೇ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗುಡ್ಡೆಹೊಸೂರು ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ನಿವೃತ್ತ ಅಧ್ಯಾಪಕ ಬಿ.ಸಿ.ಶಂಕ್ರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮೂರು ದಶಕದ ನಂತರ ಒಂದೆಡೆ ಒಗ್ಗೂಡಿದ ಹಳೆಯ ಸ್ನೇಹಿತರೆಲ್ಲರೂ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಕ್ಕು ನಲಿದರು.
50 ರ ಪ್ರಾಯ ದಾಟಿರುವ 45 ಮಂದಿ ಸ್ನೇಹಿತರ ಬಳಗ ಬೆಳಗಿನಿಂದ ಸಂಜೆವರೆಗೆ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿ ಬದುಕಿನ ಸುಖ ದುಃಖಗಳನ್ನು ಹಂಚಿಕೊಂಡು ಸಮ್ಮಿಲನ ದಿನವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಿದರು.
ಹಳೆ ವಿದ್ಯಾರ್ಥಿಗಳ ಸಮ್ಮಿಲನದ ರೂವಾರಿ ಲೂಯಿಸ್ ಡಿಸಿಲ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿಸುಮಾರು 34 ವರ್ಷಗಳ ನಂತರ ವಿವಿಧೆಡೆ ನೆಲೆಸಿರುವ ಸ್ನೇಹಿತರು ಮತ್ತೆ ಒಂದೆಡೆ ಸೇರಿ ಸಂಭ್ರಮಿಸುವುದು ಉತ್ತಮ ಬಾಂಧ್ಯವದ ಸಂಕೇತ. ಬದುಕಿನ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮೆಲುಕು ಹಾಕಲು ಜೊತೆಗೂಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಸಮ್ಮಿಲನ ಕಾರ್ಯಕ್ರಮದ ಕುರಿತು ಮಾತನಾಡಿದ ಉಣ್ಣಿಕೃಷ್ಣ ಅವರು, ಹೊರ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿರುವ ಸ್ನೇಹಿತರ ಪೈಕಿ ಹಲವು ಉನ್ನತ ಸ್ಥಾನಮಾನಗಳಲ್ಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದವರಿದ್ದಾರೆ. ಅವರೆಲ್ಲರೂ ಕೂಡ ತಮ್ಮ ಸ್ನೇಹಿತರಿಗಾಗಿ ಬಿಡುವು ಮಾಡಿಕೊಂಡು ಬಂದು ಸಂಘಟಿತರಾಗಿ ಸಂಭ್ರಮದಲ್ಲಿ ತೊಡಗಿಸಿಕೊಳ್ಳುವುದು ಶ್ಲಾಘನೀಯ ಸಂಗತಿ ಎಂದು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಹಳೆಯ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸ್ನೇಹಿತರನ್ನು ಸಂಘಟಿಸಿ ಕಾರ್ಯಕ್ರಮ ಸಂಯೋಜಿಸಿದ ಹಳೆ ವಿದ್ಯಾರ್ಥಿಗಳಾದ ಬಿ.ಎಲ್.ಹರೀಶ್, ಪಿ.ಆರ್.ಮಂಜುನಾಥ್, ಸುಮತಿ ಸೋನಿಕ, ಕವಿತಾ, ಉಣ್ಣಿಕೃಷ್ಣ ಮತ್ತಿತರರು ಕಾರ್ಯಕ್ರಮ ನೆರವೇರಿಸಿಕೊಟ್ಟರು. ಪ್ರಾಧ್ಯಾಪಕ ಬಿ.ಸಿ.ಶಂಕ್ರಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!