ಕುಶಾಲನಗರ, ಫೆ 19: ಕೊಡಗು ವಿವಿ ಮುಚ್ಚುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಕಾಲೇಜುಗಳಿಂದ ಮೆರವಣಿಗೆ ಮೂಲಕ
ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿ ಬೃಹತ್ ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ರಾಜ್ಯ ಸರಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು. ಕೊಡಗು ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿ ಘೋಷಣೆಗಳು ಕೂಗಿದರು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಸರಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬದಲಾಗಿ ಅನಾನುಕೂಲ ಉಂಟುಮಾಡುವ ನಿರ್ಧಾರವನ್ನು ಕೈಗೊಳ್ಳುತ್ತಿರುವುದು ಖಂಡನೀಯ. ಸ್ವಾತಂತ್ರ್ಯಾ ನಂತರ ಕೊಡಗಿಗೆ ಪ್ರಥಮವಾಗಿ ದಕ್ಕಿರುವ ವಿವಿಯನ್ನು ಮುಚ್ಚುವ ನಿರ್ಧಾರದ ಮೂಲಕ ಕೊಡಗಿನ ಜನತೆಗೆ ಅನ್ಯಾಯವೆಸಗಲು ಮುಂದಾಗಿದೆ. ಹಣಕಾಸಿನ ಕೊರತೆ ಕಾರಣ ನೀಡಿ ವಿವಿಗಳನ್ನು ಮುಚ್ಚಲು ಹೊರಟಿರುವ ಸರಕಾರದ ನಿರ್ಧಾರ ಶೋಭೆ ತರುವಂತಹದ್ದಲ್ಲ.
ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಮರ್ಪಕವಾಗಿ ಮುನ್ನಡೆಯುತ್ತಿರುವ ಕೊಡಗು ವಿವಿ ಮುಚ್ಚುವ ನಿರ್ಧಾರ ಹಿಂತೆಗೆದುಕೊಳ್ಳಬೇಕು. ಉಚಿತ ಯೋಜನೆಗಳಿಗೆ ಹಣ ನೀಡುವ ಸರಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಣ ಒದಗಿಸಲು ಆಗದೆ ಇದ್ದಲ್ಲಿ ವಿದ್ಯಾರ್ಥಿಗಳು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಸರಕಾರಕ್ಕೆ ನೀಡಲು ಸಿದ್ದರಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ರೋಹಿತ್, ತಾಲೂಕು ಸಂಚಾಲಕ ಗಂಧರ್ವ, ಪ್ರಮುಖರಾದ ಪ್ರಮೋದ್, ಲಯನ್, ಪವನ್, ಬಿಪಿನ್ ಸೇರಿದಂತೆ ಕನ್ನಡಭಾರತಿ, ಅನುಗ್ರಹ, ವಿವೇಕಾನಂದ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Back to top button
error: Content is protected !!