ಅವ್ಯವಸ್ಥೆ
ಮೂಲಭೂತ ಸೌಕರ್ಯ ವಂಚಿತ ದುಬಾರೆ ಹಾಡಿಯ ನಿವಾಸಿಗಳು: ಮುಖಂಡರ ಹಾಡಿ ಭೇಟಿ

ಕುಶಾಲನಗರ, ಫೆ 01:ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ದುಬಾರೆ ಹಾಡಿ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿಕೊಂಡಿದ್ದಾರೆ.
ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ವಾಸ, ಕುಡಿಯಲು ಶುದ್ದ ನೀರಿಲ್ಲ, ಸಮರ್ಪಕ ವಿದ್ಯುತ್ ಸೌಲಭ್ಯವಿಲ್ಲ, ಹಾಡಿಗೆ ಇರುವ ಅಂಗನವಾಡಿಗೆ ಶಿಕ್ಷಕರಿಲ್ಲ, ರಸ್ತೆ ಅವ್ಯವಸ್ಥೆಯಿಂದ ನಲುಗಿರುವ ಬಗ್ಗೆ ಹಾಡಿಯ ಮಾವುತ ಕವಾಡಿಗರು ಅಳಲು ತೋಡಿಕೊಂಡಿದ್ದಾರೆ.
ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷರೂ ಆದ ನಂಜರಾಯಪಟ್ಟಣ ಗ್ರಾಪಂ ಸದಸ್ಯ ಅರ್.ಕೆ.ಚಂದ್ರ ಅವರ ಮನವಿ ಮೇರೆಗೆ ಜಿಪಂ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷರಾದ ರವಿ ಕುಶಾಲಪ್ಪ ಹಾಡಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಹಾಡಿಗೆ ಭೇಟಿ ನೀಡಿದ ಮುಖಂಡರೊಂದಿಗೆ ಸಮಸ್ಯೆಗಳನ್ನು ತೆರೆದಿಟ್ಟ ಮಾವುತ, ಕವಾಡಿಗರು ಹಾಗೂ ಹಾಡಿ ನಿವಾಸಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಹಾಡಿಯಲ್ಲಿ ಇದುವರೆಗೆ ಹಲವರಿಗೆ ಮನೆ ಮಂಜೂರಾಗಿಲ್ಲ. ಕೆಲವರಿಗೆ ಪಡಿತರ ಚೀಟಿ, ಐಡಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲದ ಕಾರಣ ಮನೆ ಮಂಜೂರಾಗದೆ ಜೋಪಡಿಯಲ್ಲಿ ವಾಸವಿದ್ದಾರೆ. ರಾತ್ರಿ ವೇಳೆ ತುರ್ತು ಪರಿಸ್ಥಿತಿ ಸಂದರ್ಭ ಸಿದ್ದಾಪುರ, ಮಡಿಕೇರಿ ಗೆ ತೆರಳಲು ಇರುವ ಕಾಡೊಳಗಿನ ದುಬಾರೆ-ಮಾಲ್ದಾರೆ ಸಂಪರ್ಕ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ರೋಗಿಗಳನ್ನು ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಜೀವ ಬಿಟ್ಟ ಪ್ರಸಂಗ ಕೂಡ ನಡೆದಿದೆ. ಮಳೆಗಾಲದಲ್ಲಿ ಮನೆಗಳು ಶಿಥಿಲಗೊಳ್ಳುತ್ತದೆ, ಮನೆಗಳಿಗೆ ಸಮರ್ಪಕವಾದ ಸಂಪರ್ಕ ರಸ್ತೆಯಿಲ್ಲ, ಒಂದೂವರೆ ವರ್ಷದಿಂದ ಅಂಗನವಾಡಿಗೆ ಶಿಕ್ಷಕರಿಲ್ಲ ಎಂದು ದುಬಾರೆ ಹಾಡಿ ಮುಖಂಡ ಜೆ.ಕೆ.ಡೋಬಿ, ಆನೆ ಮಾವುತರಾದ ಜೆ.ಟಿ.ಈರ, ಜೆ.ಡಿ.ವಿಜಯ, ಭಾಸ್ಕರ, ಚಿನ್ನಪ್ಪ, ಕುಮಾರ ಮಾಹಿತಿ ನೀಡಿದರು.



