ಪ್ರತಿಭಟನೆ
ಮೂರನೇ ಬಾರಿ ಪ್ರತಾಪ್ ಸಿಂಹಗೆ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿತು ಪ್ರತಿಭಟನೆ

ಕುಶಾಲನಗರ: ಕಳೆದ 10 ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿರುವ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ 3ನೇ ಅವಧಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಕುಶಾಲನಗರ ಬಿಜೆಪಿ ಪಕ್ಷದ ಬೆಂಬಲಿಗರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟಿಸಿ ಒತ್ತಾಯಿಸಿದರು.
ಪ್ರತಾಪ ಸಿಂಹ ಪರ ಘೋಷಣೆ ಕೂಗಿದ ಪ್ರತಿಭಟನಾಕಾರರು ಮತ್ತೊಮ್ಮೆ ಪ್ರತಾಪ್ ಸಿಂಹಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಸಾಮಾನ್ಯ ಕಾರ್ಯಕರ್ತನಿಗೂ ಪ್ರತಾಪ್ ಸಿಂಹ ಸಿಗುತ್ತಿದ್ದರು. ಅವರ ಅವಧಿಯಲ್ಲಿ ಕೊಡಗು, ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಸಿಂಹ ಅವರಿಗೆ ದೂರದೃಷ್ಟಿ ಇತ್ತು. ಹಿಂದುಗಳ ಪೈರ್ ಬ್ರ್ಯಾಂಡ್ ಅಂತಲೇ ಖ್ಯಾತಿ ಪಡೆದಿದ್ದರು. ಬಿಜೆಪಿ ಹೈಕಮಾಂಡ್ 3ನೇ ಅವಧಿಗೆ ಮತ್ತೊಮ್ಮೆ ಪಕ್ಷದ ಟಿಕೆಟ್ ಅನ್ನು ಸಿಂಹ ಅವರಿಗೆ ಕೊಡಬೇಕೆಂದು ಒತ್ತಾಯಿಸಿದರು.
ಯುವ ಮೋರ್ಚಾದ ಪ್ರಮುಖ ಕೆ.ಡಿ. ಪ್ರಶಾಂತ್ ಮಾತನಾಡಿ, ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಆಯ್ಕೆ ಬಯಸಿ ಕೊಡಗು- ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು, ಅವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡುವಂತೆ ಒತ್ತಾಯಿಸುತ್ತೇನೆ. ಹಿಂದುತ್ವದ ಪ್ರತಿಪಾದಕ, ನೇರ ನುಡಿಯ ಹರಿತ ಮಾತಿನ ವಾಗ್ಮಿ, ರಾಷ್ಟ್ರೀಯತೆಯ ಬಗ್ಗೆ ಕ್ರಾಂತಿಕಾರಿ ಬರವಣೆಗೆ ಮೂಲಕ ಯುವ ಸಮುದಾಯವನ್ನು ಬಡಿದೆಬ್ಬಿಸಿದ ನುರಿತ ಲೇಖಕ, ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಂತಹ ಧೀಮಂತ ಯುವ ನಾಯಕ ಸಿಂಹ ರವರಿಗೆ ಲೋಕಸಭೆಗೆ ಅವಕಾಶ ನೀಡದೆ ಕುತಂತ್ರ ರಾಜಕೀಯಕ್ಕೆ ಪ್ರತಾಪ್ ಸಿಂಹ ರವರನ್ನು ಬಲಿಪಶು ಮಾಡುವುದು ಸರಿಯಲ್ಲಾ ಎಂದರು.
ಪುರಸಭೆ ಸದಸ್ಯ ಬಿ.ಅಮೃತ್ರಾಜ್ ಮತ್ತು ರಜನಿಕಾಂತ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಸುಮನ್ ಗೌಡ, ಕೆ.ಜಿ.ಮನು, ಪುಷ್ಪ ನಾಗೇಶ್, ಇಂದಿರಾ ರಮೇಶ್, ಮಣಿಕಂಠ, ಚಂದ್ರು, ನಿತ್ಯಾನಂದ, ರಮೇಶ್ ಹೊಸಕೋಟೆ, ಪೃಥ್ವಿ ಮತ್ತಿತರರು ಉಪಸ್ಥಿತರಿದ್ದರು.



