ಕುಶಾಲನಗರ, ಜೂ 16:ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಆಶ್ರಯದಲ್ಲಿ ವಿಶ್ವ ಮಹಿಳಾ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎನ್ ಟಿ ಸಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಪುಷ್ಪಾ ಉದ್ಘಾಟಿಸಿದರು. ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ ವಿಚಾರದ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಜೀವನದಲ್ಲಿ ಮಹಿಳೆಯರ ಕರ್ತವ್ಯ, ಜವಬ್ದಾರಿ ಹೆಚ್ಚಿನದ್ದಾಗಿದೆ. ಮನೆಯಲ್ಲಿ, ಸಮಾಜದಲ್ಲಿ, ವೃತ್ತಿ ಜೀವನದಲ್ಲಿ ಗೌರವ ಗಳಿಸುವುದು ನಮ್ಮ ನಡವಳಿಕೆ ಹಾಗೂ ಸಾಮರ್ಥ್ಯದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮಹಿಳೆಯರು ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ ಎಂದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮುಖ್ಯ ಭಾಷಣ ಮಾಡಿದರು. ಮಹಿಳೆಯರ ದಿನ ಎಂದರೆ ಅಡುಗೆ ಮನೆಯನ್ನು ಬಿಟ್ಟು ಸಮಾಜದಲ್ಲಿ ನಾವು ಕಂಡುಕೊಳ್ಳುವ ಅಸ್ತಿತ್ವ ಎನ್ನುವುದನ್ನು ಮಹಿಳೆಯರು
ಅರಿತುಕೊಳ್ಳಬೇಕಿದೆ ಎಂದರು. ಸಮಾಜದಲ್ಲಿ ಮಹಿಳೆಯರಿಗೆ ಭಯ ಮುಕ್ತ ವಾತಾವರಣ ಕಲ್ಪಿಸಿಕೊಡುವುದು ಸೇರಿದಂತೆ ಮಹಿಳೆಯರ ಹಕ್ಕುಗಳಿಗೆ ಬಾಧ್ಯತೆ ಬಾರದಂತೆ ನಡೆದುಕೊಳ್ಳುವುದೇ ಮಹಿಳೆಯರಿಗೆ ನೀಡುವ ನಿಜವಾದ ಗೌರವ ಎಂದರು. ಮಕ್ಕಳಿಗಾಗಿ ಆಸ್ತಿ, ಸಂಪತ್ತು ಕೂಡಿಡುವುದರೊಂದಿಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು. ಮಹಿಳೆಯರು ಸುಶಿಕ್ಷತರಾಗಬೇಕಿದೆ. ಧೈರ್ಯ ಮೈಗೂಡಿಸಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಸರಕಾರ ಒದಗಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕರೆ ನೀಡಿದರು.
ಕುಶಾಲನಗರ ಟೌನ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ಅವರು, ಮಹಿಳಾ ಸುರಕ್ಷತಾ ಕಾನೂನುಗಳ ಬಗ್ಗೆ ಮಾತನಾಡಿದರು.
ಎನ್.ಟಿ.ಸಿ.ವ್ಯವಸ್ಥಾಪಕ ನಿರ್ದೇಶಕಿ ಆಶಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಎನ್.ಟಿ.ಸಿ.ಆವರಣದಲ್ಲಿ ಗಿಡ ನೀಡಲಾಯಿತು.
ಕುಶಾಲನಗರ
ಟೌನ್ ಪೊಲೀಸ್ ಠಾಣಾಧಿಕಾರಿಗಳಾದ ಎಚ್.ಟಿ.ಗೀತಾ,ಶಿವಣ್ಣ, ಸಂಚಾರ ಠಾಣಾಧಿಕಾರಿ ಗಣೇಶ್, ಎನ್.ಟಿ.ಸಿ ಮಾಲೀಕ ಅಬ್ದುಲ್ ಸಲಾಂ, ಸಿಬ್ಬಂದಿಗಳಾದ ಜ್ಯೋತಿ, ಧನ್ಯ, ಶಶಿ, ಸೇರಿದಂತೆ ಎನ್.ಟಿ.ಸಿ. ಕೇಂದ್ರದ ಮಳಿಗೆಗಳ ವರ್ತಕರು, ಸಿಬ್ಬಂದಿಗಳು ಇದ್ದರು.
Back to top button
error: Content is protected !!