ಕ್ರೈಂ

ಕುಶಾಲನಗರದ ದಂಡಿನಪೇಟೆ ರೌಡಿಶೀಟರ್ ಗಡಿಪಾರು

ಕುಶಾಲನಗರ, ‌ಏ 19:ಕುಶಾಲನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ದಂಡಿನಪೇಟೆ ನಿವಾಸಿಯಾದ ರೌಡಿ ಆಸಾಮಿ ಮನ್ಸೂರ್ ಅಲಿ (ತಂದೆ: ಲೇಟ್ ಮಹಮ್ಮದ್ ಹಮೀದ್), ಪ್ರಾಯ 43 ವರ್ಷ, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಈತನು ಸಾರ್ವಜನಿಕ ಸ್ಥಳಗಳಲ್ಲಿ ಅಮಾಯಕರೊಂದಿಗೆ ದೊಂಬಿ, ಗಲಾಟೆ, ಹಲ್ಲೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದನು. ಈ ಸಂಬಂಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರದೀಪ್ ಬಿ.ಆರ್. ಸರ್ ಅವರ ವರದಿಯ ಮೇರೆಗೆ ಕೊಡಗು ಜಿಲ್ಲಾ ಎಸ್.ಪಿ. ಕುಮಾರಿ ಬಿಂದುಮಣಿ ಮೇಡಂ ಅವರು ಸದರಿ ರೌಡಿ ಆಸಾಮಿಯನ್ನು ಕೊಡಗು ಜಿಲ್ಲೆಯಿಂದ ಗದಗ ಜಿಲ್ಲೆಗೆ ಗಡಿಪಾರು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಗಡಿಪಾರಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅನಾರೋಗ್ಯದ ಸುಳ್ಳು ನೆಪ ಹೇಳಿ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೂ, ಕುಶಾಲನಗರ ಟೌನ್ ಪೊಲೀಸರು ವೈದ್ಯರಿಂದ ದೈಹಿಕ ಆರೋಗ್ಯ ಸ್ಥಿತಿಯ ಬಗ್ಗೆ ದೃಢೀಕರಣ ವರದಿ ಪಡೆದು, ನಂತರ ಸದರಿ ರೌಡಿ ಆಸಾಮಿಯನ್ನು ಗದಗ ಜಿಲ್ಲೆಯ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಬಂದಿದ್ದಾರೆ.

ಈ ಕ್ರಮದ ಮೂಲಕ ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕ್ರಿಮಿನಲ್ ಅಪರಾಧಿಗಳು ಹಾಗೂ ಪುಡಿ ರೌಡಿಗಳಿಗೆ ಕುಶಾಲನಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಸರ್ ಹಾಗೂ ಮಾನ್ಯ ಕೊಡಗು ಜಿಲ್ಲಾ ಎಸ್.ಪಿ. ಬಿಂದುಮಣಿ ಮೇಡಂ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!