ಕುಶಾಲನಗರ, ಫೆ 22: ಕೊಡಗು ವಿಶ್ವ ವಿದ್ಯಾಲಯವನ್ನು ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗುಡ್ಡಗಾಡು ಪ್ರದೇಶ ಹಾಗೂ ಇಲ್ಲಿನ ಬಹುತೇಕ ಸಮುದಾಯ ಕೂಲಿಕಾರ್ಮಿಕರಾಗಿದ್ದಾರೆ. ಗ್ರಾಮೀಣ ಹಾಗೂ ಜನಸಾಮಾನ್ಯರ ಮಕ್ಕಳಿಗೆ ಕೊಡಗು ವಿವಿ ರಚನೆಯಿಂದ ಮನೆ ಬಾಗಿಲಲ್ಲಿ ಕಡಿಮೆ ಹಣದಲ್ಲಿ ಉನ್ನತ ಶಿಕ್ಷಣ ದೊರೆಯುತ್ತಿದೆ.ಕೊಡಗು ವಿವಿ ಬಂದ್ ಮಾಡಿದರೆ ಉನ್ನತ ಶಿಕ್ಷಣಕ್ಕಾಗಿ ದೂರದ ಮಂಗಳೂರು ಹಾಗೂ ಮೈಸೂರು ಅವಲಂಬಿಸಬೇಕಾಗುತ್ತದೆ.ಜೊತೆಗೆ ಅವಕಾಶಗಳು ಕಡಿಮೆ ಇರುತ್ತವೆ.ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗು ವಿವಿಯನ್ನು ಮುಂದುವರೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು. ಕೊಡಗು ವಿವಿ ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ಶಿವಪ್ಪ ಹೇಳಿದರು.
ಮಹಾಸಭಾದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ ಮಾತನಾಡಿ,
ಕೊಡಗು ವಿವಿ ಉಳಿವಿಗಾಗಿ ಹಿತರಕ್ಷಣಾ ಬಳಗದ ಹೋರಾಟಕ್ಕೆ ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಗೋಷ್ಠಿಯಲ್ಲಿ
ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಖಜಾಂಜಿ ಉದಯಕುಮಾರ್,ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಚ್.ಎಂ.ಮಧುಸೂದನ್, ನಿರ್ದೇಶಕ ಕೆ.ಡಿ.ಪ್ರಶಾಂತ್, ಅಮೃತ್ ಇದ್ದರು.
Back to top button
error: Content is protected !!