ಮಳೆ

ಹನಗೋಡು-ಚಿಲ್ಕುಂದ ಭಾಗದಲ್ಲಿ ಕೊಚ್ಚಿ ಹೋದ ಕೆರೆ ಏರಿ-ರಸ್ತೆಗಳು, ಅಪಾರ ಹಾನಿ

ಅಂಗಡಿಗೆ ನುಗ್ಗಿದ ಮಳೆ ನೀರು ಗೊಬ್ಬರ-ಸಿಮೆಂಟ್, ದಿನಸಿ ಪದಾರ್ಥ ಹಾನಿ.

ಕುಶಾಲನಗರ, ಅ 17:  ಹನಗೋಡು ಹೋಬಳಿಯಾದ್ಯಂತ ಸುರಿದ ಬಾರೀ ಮಳೆಯಿಂದಾಗಿ ವಾಸದ ಮನೆಗಳಿಗೆ ಹಾನಿಯಾಗಿದ್ದರೆ, ಹನಗೋಡು ಮುಖ್ಯರಸ್ತೆಯ ಅಂಗಡಿ, ಬೇಕರಿ ದಿನಸಿ,ಸಿಮೆಂಟ್, ಗೊಬ್ಬರ ಮತ್ತಿತರ ೧೦ಕ್ಕೂಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಪದಾರ್ಥಗಳು ನೀರಿನಲ್ಲಿ ತೋಯ್ದುಸಂಪೂರ್ಣ ಹಾಳಾಗಿದೆ. ಶುಂಠಿ, ಜೋಳ, ಅಡಿಕೆ ಮತ್ತಿತರ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ತಟ್ಟೆಕೆರೆ-ಹೈರಿಗೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಬ್ಬೂರು-ಹನಗೋಡು, ಹೊನ್ನೇನಹಳ್ಳಿ-ಹೊಸಕೋಟೆಗೇಟ್ ರಸ್ತೆ ಸಂಚಾರ ಬಂದ್ ಆಗಿತ್ತು. ಹನಗೋಡು ರಸ್ತೆಯ ತಟ್ಟೆಕೆರೆ ಕೆರೆ, ಕೋಡಿ ಬಿದ್ದ ಹಿನ್ನೆಲೆಯಲ್ಲಿ ನಿಲುವಾಗಿಲು ಗ್ರಾಮದ ನಂಜುಂಡ ಸ್ವಾಮಿ ರಗೆ ಸೇರಿದ ಅಡಿಕೆ, ಬಾಳೆ, ತೆಂಗಿನ ತೋಟದಲ್ಲಿ ಸುಮಾರು ೫ ಅಡಿಯಷ್ಟು ನೀರು ನಿಂತಿದೆ.
ಹನಗೋಡು ಗ್ರಾಮದ ಬಸ್ ನಿಲ್ದಾಣದ ಎದುರಿನ ಚಾಮುಂಡೇಶ್ವರಿ ಗೊಬ್ಬರದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಸುಮಾರು ೬೦ಚೀಲ ರಸಗೊಬ್ಬರ ನೀರಿನಲ್ಲಿ ತೊಯ್ದುಹೋಗಿದೆ. ಶ್ರೀಧರ್ ಅವರ ಬೇಕರಿಯಲ್ಲಿ ಸಕ್ಕರೆ ಹಾಗೂ ಮೈದಾ ಸೇರಿದಂತೆ ಬೇಕರಿ ತಿನಿಸುಗಳು ನೀರಿನಲ್ಲಿ ಕರಗಿ ಹೋಗಿವೆ. ಕಾಳಬೋಚನಹಳ್ಳಿ ಗ್ರಾಮದ ತೋಪೇಗೌಡ ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಿ ರಾತ್ರಿ ಸುರಿದ ಭಾರಿ ಮಳೆಯ ನೀರು ಮನೆ ನುಗ್ಗಿ ಹತ್ತಿಯೆಲ್ಲಹಾಳಾಗಿದೆ.
ಹೈರಿಗೆ ಕೆರೆ ಭರ್ತಿ ಬೆಳೆನಾಶ, ನದಿಗೆ ಪ್ರವಾಹದ ನೀರು:
ತಾಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾದ ಹೈರಿಗೆ ಕೆರೆ ಕೋಡಿ ಬಿದ್ದು ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದೆ. ಕೆರೆಯ ಅಚ್ಚುಕಟ್ಟು ಪ್ರದೇಶ ಹಾಗೂ ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ.
ಹೈರಿಗೆ ಕೆರೆ ಕೋಡಿ ನೀರು ಉಕ್ಕಿ ಹರಿದು ರಸ್ತೆ ಹಾಳಾಗಿದೆ.
ಹುಣಸೂರು- ಹನಗೋಡು ಮುಖ್ಯ ರಸ್ತೆಯ ಹೊನ್ನೇನಹಳ್ಳಿ ಬಳಿ ಕಿರು ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸೇತುವೆ ಮೇಲೆ ನೀರು ಹರಿಯುತ್ತಿರುವ ಸ್ಥಳಕ್ಕೆ ಶಾಸಕ ಎಚ್.ಪಿ.ಮಂಜುನಾಥ್, ಉಪ ವಿಭಾಗಾಕಾರಿ ವರ್ಣಿತ್ ನೇಗಿ, ತಹಸಿಲ್ದಾರ್ ಡಾ. ಅಶೋಕ್, ಲೋಕೋಪಯೋಗಿ ಇಲಾಖೆಯ ಎಇಇ ಭೋಜರಾಜ್, ಜೆಇ ಪ್ರಭಾಕರ್ ಹಾಗೂ ನೀರಾವರಿ ಇಲಾಖೆ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಲ್ಕುಂದ ಭಾಗದಲ್ಲಿ ಬೆಳೆ ಹಾನಿ:
ಚಿಲ್ಕುಂದ ಹುಲ್ಲುಕೆರೆ ತುಂಬಿ ಕೋಡಿ ಬಿದ್ದಿದೆಯಲ್ಲದೆ ಕೋಡಿಯಲ್ಲಿ ಹೆಚ್ಚಿನ ಊರು ಹರಿಯದಿದ್ದರಿಂದಾಗಿ ಕೆರೆ ಏರಿ ಒಡೆದು ನೀರು ಹರಿದು ಕೆರೆ ಕೆಳಬಾಗ ಹಾಗೂ ಕೆರೆ ಹಿಂಬಾಗದ ಶಿವರಾಮೇಗೌಡ, ಹೊನ್ನಮ್ಮ, ಪ್ರತಿಮಾ ಮತ್ತಿತರ ರೈತರ ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ರಾಗಿ, ಬದನೆ, ಜೋಳ ಮತ್ತಿತರ ಬೆಳೆಗಳು ಜಲಾವೃತವಾಗಿದ್ದರೆ, ದೇವೇಂದ್ರರವರು ಇತ್ತೀಚೆಗೆ ಕೆರೆಗೆ ಬಿಟ್ಟಿದ್ದ ಮೀನು ಮರಿಗಳು ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಒಟ್ಟಾರೆ ಶನಿವಾರ ತಾಲೂಕಾದ್ಯಂತ ಸುರಿದ ಮಳೆಗೆ ಕೋಟಿ ರೂಗೂ ಹೆಚ್ಚು ನಷ್ಟ ಸಂಭವಿಸಿದೆ.
ಮದ್ಯರಾತ್ರಿ ೨ರ ವೇಳೆಯಲ್ಲಿ ವಿಷಯ ತಿಳಿದ ಶಾಸಕ ಎಚ್.ಪಿ.ಮಂಜುನಾಥರು ಬಳ್ಳಾರಿಯ ಪ್ರವಾಸ ಮೊಟಕುಗೊಳಿಸಿದ ಶಾಸಕ ಮಂಜುನಾಥರು ವಾಪಸ್ ಮರಳಿ ಬೆಳಗ್ಗೆಯಿಂದಲೇ ಮಳೆ ಹಾನಿಪ್ರದೇಶಗಳಿಗೆ ಭೇಟಿ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!