ಸನ್ಮಾನ

ಸಾಹಿತ್ಯ ಹಾಗೂ ಸಾಂಸ್ಕ್ರತಿಕ ವೇದಿಕೆಯಿಂದ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಕುಶಾಲನಗರ, ಮೇ 14 : ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು, ಈ ನಾಡಿನ ನೆಲ, ಜಲ ಸಂಸ್ಕೃತಿ ಉಪಾಸನೆ ಈ ನಾಡಿನ ಪ್ರತಿಯೊಬ್ಬರ ಉಸಿರಾಗಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಕರೆಕೊಟ್ಟರು.
ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು.
ಇತರೇ ಭಾಷೆಗಳನ್ನು ಗೌರವಿಸಿ ನಮ್ಮ ತಾಯಿ ಭಾಷೆಯನ್ನು ಪೂಜಿಸಬೇಕು.
ಕನ್ನಡ ಈ ನೆಲದ ಅಸ್ಮಿತೆ ಹಾಗೂ ಸಂಸ್ಕೃತಿ.
ಕನ್ನಡದಲ್ಲಿ ಓದಿ ಪರಿಪೂರ್ಣವಾದ ಜೀವನ ನಡೆಸಿದ ಮಹನೀಯರು ನಮಗೆ ಆದರ್ಶರಾಗಬೇಕು.
ನಮ್ಮಲ್ಲಿನ ವಿದ್ವತ್ತನ್ನು ಬಳಸಲು ಕನ್ನಡ ಪ್ರೇರಕವಾಗಬೇಕು.
ಶಿಕ್ಷಣ ಹೊಟ್ಟೆಪಾಡಿನ ಸಾಧನವಾಗದೇ ನಮ್ಮನ್ನು ಎತ್ತರಕ್ಕೆ ಒಯ್ಯುವ ಸಾಧನವಾಗಬೇಕು.
ಸಮಾಜ, ಕುಟುಂಬ, ಪರಿಸರಕ್ಕೆ ಪೂರಕವಾಗುವ ಶಿಕ್ಷಣ ನಮ್ಮದಾಗಬೇಕು.
ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಎರಡೇ ಆಯ್ಕೆಯಲ್ಲ.
ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ಪಡೆದು ಸಾಧನೆ ತೋರಬೇಕೆಂದು ಡಾ.ಅಶೋಕ್ ಸಂಗಪ್ಪ ಕರೆನೀಡಿದರು.
ಅನುಗ್ರಹ ಕಾಲೇಜಿನ ಧರ್ಮದರ್ಶಿ ಆರ್.ಕೆ.ನಾಗೇಂದ್ರ ಮಾತನಾಡಿ, ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ತ ಧನಸಹಾಯದೊಂದಿಗೆ ಪ್ರೋತ್ಸಾಹಿಸುವ ಕೆಲಸ ವಾಗಬೇಕಿದೆ.
ಸಾಧನೆ ತೋರಿದ ವಿದ್ಯಾರ್ಥಿಗಳು, ಉಪನ್ಯಾಸಕರು,ಹಾಗೂ ಆ ಮಕ್ಕಳನ್ನು ಮೆರವಣಿಗೆ ಮೂಲಕ ಸತ್ಕರಿಸುವ ಕೆಲಸ ಸಾಮೂಹಿಕವಾಗಿ ನಡೆಯ ಬೇಕಿದೆ.
ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗುವ ಮಕ್ಕಳಿಗೆ ಹಾಗೂ ಆ ಶಾಲೆಗಳ ಶಿಕ್ಷಕರುಗಳಿಗೆ ಸರ್ಕಾರ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ.
ಆದರೆ ಶಿಕ್ಷೆಯಿಲ್ಲದ ಶಿಕ್ಷಣದಿಂದಾಗಿ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಮಸುಕಾಗುತ್ತಿದೆ ಎಂದು ನಾಗೇಂದ್ರ ವಿಷಾದಿಸಿದರು.
ಕಾಲೇಜು ಪ್ರಾಂಶುಪಾಲೆ ಡಾ.ಬಿ.ಡಿ.ಚೈತ್ರ ಮಾತನಾಡಿ, ಇಡೀ ವಿಶ್ವದಲ್ಲಿಯೇ ಅತ್ಯಂತ ಸುಂದರ ವಾಗಿರುವ ಕನ್ನಡ ಭಾಷೆಯನ್ನು ಬೆಳೆಸುವ ಹಾಗೂ ಗೌರವಿಸುವ ಕೆಲಸ ಇಂದಿನ ಯುವ ಜನಾಂಗದಿಂದ ಆಗಬೇಕಿದೆ.
ಹಾಗೆಯೇ ತಾಯಿ ಹಾಗೂ ತಾಯ್ನಾಡನ್ನು ಪೂಜಿಸುವಂತಾಗಬೇಕು ಎಂದರು.
ಸುಂಟಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಕನ್ನಡ ಭಾಷೆಗಿರುವ ತಾಕತ್ತು ವಿಶ್ವದ ಬೇರಾವುದೇ ಭಾಷೆಗಳಿಗಿಲ್ಲ.
ಕನ್ನಡದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಕನ್ನಡ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ ಎಂದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯ ಮೇಲೆ ಯುವ ಜನಾಂಗ ಹೆಚ್ಚು ಸದಭಿಮಾನ ಮುಡಿಸಲು ಪ್ರೇರಣೆಯಾಗುವ ಉದ್ದೇಶದಿಂದ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ ಎಂದರು.
ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ದರ್ಶನ್ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ,
ಕಾಲೇಜಿನ ಧರ್ಮದರ್ಶಿಗಳಾದ ಶ್ಯಾಮಲಾ ನಾಗೇಂದ್ರ, ಚಂದ್ರಶೇಖರ್, ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಪಾಣತ್ತಲೆ ಗಿರೀಶ್, ಕಾಲೇಜಿನ ಉಪಪ್ರಾಂಶುಪಾಲೆ ಮೇಘನಾ, ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!