ಕಾರ್ಯಕ್ರಮ

ಉದ್ದಿಮೆದಾರರಿಗೆ ರಫ್ತು ಸಂಬಂಧಿತ ಝಡ್.ಇ.ಡಿ. ಮತ್ತು ಲೀನ್ ಕುರಿತು ಅರಿವು ಕಾರ್ಯಕ್ರಮ

ಕುಶಾಲನಗರ, ಮಾ 05: ಝಡ್.ಇ.ಡಿ. ಮತ್ತು ಲೀನ್ ಯೋಜನೆ ಕುರಿತು ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಕುಶಾಲನಗರದ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸಣ್ಣ ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಎಂ.
ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ
ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳುವಂತಾಗಬೇಕಿದೆ. ಕೈಗಾರಿಕೆ ಉದ್ಯಮದ ಬಗ್ಗೆ ಆಸಕ್ತಿ ಇರುವ ಯುವಕರಿಗೆ ಇಂತಹ ಕಾರ್ಯಗಾರಗಳಿಂದ ಉದ್ಯಮ ಆರಂಭಿಸಲು ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಉತ್ಪನ್ನಗಳನ್ನು ರಫ್ತು ಮಾಡುವ ಕುರಿತು ಬೇಕಾದ ಅಗತ್ಯ ಮಾಹಿತಿಗಳು‌ಲಭಿಸುತ್ತವೆ. ಯುವಕರು ಪರಿಸರ ಸ್ನೇಹಿ ಉದ್ಯಮ ಸ್ಥಾಪನೆಗೆ, ಉದ್ಯೋಗ ಸೃಷ್ಠಿಗೆ ಅವಕಾಶವಿದೆ. ಪರ ಊರು, ದೇಶಗಳಿಗೆ ತೆರಳುವ ಬದಲು ಇಲ್ಲಿಯೇ ತಮ್ಮ ಉದ್ಯಮ ಕಟ್ಟಿಕೊಂಡು ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ
ಕೊಡಗು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ.ಕೆ.ಸುದೀಪ್ ಕುಮಾರ್ ಮಾತನಾಡಿ ಮುಂಬರುವ ವರ್ಷಗಳಲ್ಲಿ
ಭಾರತ ಆರ್ಥಿಕತೆಯಲ್ಲಿ ವಿಶ್ವಗುರುವಾಗಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಗಾರಗಳು, ಕಾರ್ಯಕ್ರಮಗಳನ್ನು ಪ್ರತಿ ತಾಲೂಕಿನಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತಿದೆ. ಉದ್ದಿಮೆಗಳ ಸ್ಥಾಪನೆಗೆ ಸರಕಾರದಿಂದ ದೊರೆಯುವ ಅನುದಾನ, ಸಹಾಯಧನ, ಸಹಕಾರದ ಬಗ್ಗೆ ಅರಿತುಕೊಳ್ಳಬೇಕಿದೆ. ಅದೇ ರೀತಿ ಉದ್ಯಮಿಗಳು ಬ್ಯಾಂಕುಗಳೊಂದಿಗೆ ಉತ್ತಮ ಸಂಬಂಧ ಹೊಂದುವುದರೊಂದಿಗೆ ತಮ್ಮ ವ್ಯವಹಾರ ವಹಿವಾಟನ್ನು ಅಚ್ಚುಕಟ್ಟಾಗಿ ನಿರ್ವಹಣೆ ‌ಮಾಡುವ ಅಗತ್ಯವಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ‌ ನಿರ್ದೇಶಕ ಹನುಮಂತರಾಯ ಮಾತನಾಡಿ, ಝಡ್.ಇ.ಡಿ ಮತ್ತು ಲೀನ್ ಎಂದರೇನು, ಅದರ ಉದ್ದೇಶವೇನು ಎಂದು ವಿವರಿಸಿದರು.

ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ ಅಧ್ಯಕ್ಷತೆ ವಹಿಸಿದ್ದರು.
ಸರಕಾರದ ಯೋಜನೆಗಳ‌ ಬಗ್ಗೆ ಮಾಹಿತಿ ಪಡೆದುಕೊಳ್ಳುವ‌ ಮೂಲಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇತರರಿಗೂ ಕಾರ್ಯಕ್ರಮ ಮತ್ತು ಯೋಜನೆ ಉದ್ದೇಶದ ಬಗ್ಗೆ ಮಾಹಿತಿ ಹೊಂದಿದವರು ಅರಿವು ಮೂಡಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕಾಸಿಯಾ ಜಂಟಿ ಕಾರ್ಯದರ್ಶಿ
ದಿನೇಶ್ ಕುಮಾರ್ ವಿ, ಕಾಸಿಯಾ ದ ಕೊಡಗು ಜಿಲ್ಲಾ ಅಭಿವೃದ್ಧಿ ಸಮಿತಿ ಪ್ಯಾನೆಲ್ ಅಧ್ಯಕ್ಷ ದೇವೇಂಧಿರನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!