ಕುಶಾಲನಗರ, ಸೆ 24: ಕುಶಾಲನಗರದ ವಾಸವಿ ಯುವಜನ ಸಂಘ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿಷನ್ ಸ್ಟ್ರಿಂಗ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಕುಶಾಲನಗರದ ವಾಸವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದೇಹದ ಅಂಗಾಂಗಗಳು ಅತ್ಯಮೂಲ್ಯ ಎಂಬ ವಿಚಾರ ಎಲ್ಲರೂ ಮನಗಾಣಬೇಕಿದೆ. ಒತ್ತಡದ ಜೀವನಶೈಲಿ ಕಾರಣ ದೇಹಕ್ಕೆ ಉಂಟಾಗುವ ಘಾಸಿಯನ್ನು ಆರಂಭದಲ್ಲೇ ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆಗೆ ಮುಂದಾಗಬೇಕಿದೆ. ಮನಸ್ಸು ಹಾಗೂ ದೇಹ ಸದೃಢವಾಗಿದ್ದಲ್ಲಿ ಜೀವನದಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಅನುಕೂಕವಾಗಲಿದೆ. ಸಂಘಸಂಸ್ಥೆಗಳ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಪತ್ರಕರ್ತರ ಸಂಘದ ಹೋಬಳಿ ಘಟಕದ ಬೆಳ್ಳಿಹಬ್ಬದ ಅಂಗವಾಗಿ 25 ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಷನ್ ಸ್ಟ್ರಿಂಗ್ ಸಂಸ್ಥೆಯ ಅವಿನಾಶ್ ಮಾತನಾಡಿ, ಎಲ್ಲರಿಗೂ ಆಸ್ಪತ್ರೆಗೆ ತೆರಳಿ ಕಣ್ಣಿನ ತಪಾಸಣೆ ಮಾಡಲು ಸಾಧ್ಯವಾಗದ ಕಾರಣ ಹಳ್ಳಿಹಳ್ಳಿಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಉಚಿತವಾಗಿ ತಪಾಸಣೆ ನಡೆಸಿಕೊಂಡು ಬರಲಾಗುತ್ತಿದೆ. ಕನಿಷ್ಠ ದರದಲ್ಲಿ ಅಗತ್ಯವಿರುವವರಿಗೆ ಕನ್ನಡಕ ವಿತರಣೆ ಮಾಡಲಾಗುತ್ತಿದೆ ಎಂದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಕೆ.ನಾಗರಾಜಶೆಟ್ಟಿ, ಯುವಜನ ಸಂಘದ ಪದಾಧಿಕಾರಿಗಳಾದ ಅಂಜನ್, ವೈಶಾಖ್ ಇದ್ದರು.
Back to top button
error: Content is protected !!