ಕಾರ್ಯಕ್ರಮ

ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳವಾದರೆ ಮಾತ್ರ ಒಕ್ಕೂಟಕ್ಕೆ ಲಾಭ: ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್

ಪಿರಿಯಾಪಟ್ಟಣ, ಸೆ 13 : ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳವಾದರೆ ಮಾತ್ರ ಒಕ್ಕೂಟ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಬಿ.ಎ.ಪ್ರಕಾಶ್ ತಿಳಿಸಿದರು.

ತಾಲೂಕಿನ ಸೀಗೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟಗಳಿಂದ ಪ್ರತಿ ನಿತ್ಯ 1 ಕೋಟಿ ಲೀಟರ್‌ ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಖರೀದಿಸುವ ಹಾಲನ್ನು ಮಾರಾಟ ಮಾಡುವುದು ಹಾಲು ಒಕ್ಕೂಟಗಳಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌ನ ಎಲ್ಲ 72 ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ ನೀಡುವುದರ ಜೊತೆಗೆ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಹಾಗಿಂದಾಗ್ಗೆ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶ, ಕೆಎಂಎಫ್‌ನ ಉತ್ಪನ್ನಗಳು ಜನರಿಗೆ ಪರಿಚಯವಾಗಬೇಕು ಹಾಗೂ ಜನತೆಯಲ್ಲಿರುವ ಅಪೌಷ್ಟಿಕತೆಯನ್ನು ದೂರ ಮಾಡುವ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚಬೇಕು ಹಾಗೂ ಆಯಾ ಪ್ರದೇಶದಲ್ಲಿ ಪ್ರಚಲಿತ ಇರುವ ಸಿಹಿ ತಿನಿಸುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಆ ಮೂಲಕ ಹಾಲು ಮಾರಾಟ ಹೆಚ್ಚಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನೋದ್ಯಮದಲ್ಲಿ ತೊಡಗಲು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೈಮುಲ್ ವಿಸ್ತರಣಾಧಿಕಾರಿ ಸತೀಶ್ 2023-24 ನೇ ಸಾಲಿನ ಖರ್ಚು ವೆಚ್ಚಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸೀಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪುಟ್ಟಸ್ವಾಮಿ, ನಿರ್ದೆಶಕರಾದ ಆನಂದ್, ವಿಜಯಕುಮಾರ್, ಗಿಡ್ಡಮ್ಮ, ಗೌರಮ್ಮ, ರವಿ, ರಾಜಶೇಖರ್, ಮುಖ್ಯ ಕಾರ್ಯನಿರ್ವಾಹಕ ಎಸ್.ಪಿ.ರವಿ, ಹಾಲು ಪರೀಕ್ಷಕ ಕೃಷ್ಣ ಮುಖಂಡರಾದ
ನಾಗೇಗೌಡ, ಪ್ರಕಾಶ್ ರಾಜೇ ಅರಸ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!