ಕ್ರೀಡೆ
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹಾಕಿ ಟೂರ್ನಿಯಲ್ಲಿ ಕೊಡಗು ತಂಡ ಮುನ್ನಡೆ

ಕುಶಾಲನಗರ, ಆ.18: ಬೆಂಗಳೂರಿನಲ್ಲಿ ಭಾನುವಾರ ( ಆಗಸ್ಟ್ 18 ರಂದು ) ಆರಂಭಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಟೂರ್ನಿಯಲ್ಲಿ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ಜಿಲ್ಲಾ ತಂಡವು ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಶಾಂತಿನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕೊಡಗು ಮತ್ತು ವಿಜಯಪುರ ನಡುವೆ ನಡೆದ ಹಾಕಿ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು 7 ಗೋಲುಗಳನ್ನು ಪಡೆದು 7-0 ಗೋಲುಗಳ ಅಂತರದಲ್ಲಿ ವಿಜಯಪುರ ತಂಡವನ್ನು ಮಣಿಸಿತು.
ಕೊಡಗು ಹಾಕಿ ತಂಡದ ಪರವಾಗಿ ಲೋಕೇಶ್ ಆರ್ ಡಿ ಮತ್ತು ಸತೀಶ್ ತಲಾ 2 ಗೋಲುಗಳು ಹಾಗೂ ಜಾಗೃತ್ , ಮೌನ್ ಮೊಣ್ಣಪ್ಪ ಹಾಗೂ ಮಾಚಯ್ಯ ತಲಾ ಒಂದು ಗೋಲು ಬಾರಿಸಿ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು ಜಯಶಾಲಿಯಾಗಲು ಸಹಕರಿಸಿದರು. ತಂಡದ ವ್ಯವಸ್ಥಾಪಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಪೊನ್ನಂಪೇಟೆಯ ಡ್ಯಾನಿ ಈರಪ್ಪ ಕೋಚ್ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು ಜಯಶಾಲಿಯಾಗಿರುದಕ್ಕೆ ಕ್ರೀಡಾಳುಗಳನ್ನು
ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಅಭಿನಂದಿಸಿದ್ದಾರೆ.
ಸೋಮವಾರ ( ಆಗಸ್ಟ್ 19 ರಂದು ) ಹಾಕಿಯ ಸೆಮಿಫೈನಲ್ ಮತ್ತು ಅಂತಿಮ ಟೂರ್ನಿ ನಡೆಯಲಿದೆ ಎಂದು ತಿಳಿಸಲಾಗಿದೆ.



