ಪ್ರಕಟಣೆ

ಮೆರವಣಿಗೆ ವೇಳೆ ಬಾವುಟ ತಿರುಗಿಸುವಂತಿಲ್ಲ, ಬೈಕ್‌ಗೆ ಕಟ್ಟುವಂತಿಲ್ಲ.

ಎಲ್ಲ ಧರ್ಮ, ಸಮುದಾಯಗಳ ಸಹಕಾರಕ್ಕೆ ಡಿವೈಎಸ್‌ಪಿ ಮನವಿ

ಕುಶಾಲನಗರ, ಅ 08: ಹುಣಸೂರಿನಲ್ಲಿ ಮುಸ್ಲಿಂ ಸಮುದಾಯದವರು ಭಾನುವಾರ ಆಚರಿಸುವ ಈದ್-ಮಿಲಾದ್‌ನ್ನು ಶಾಂತಿಯುತವಾಗಿ ನಡೆಸಬೇಕು. ಈ ಮಿಲಾದ್‌ಗೆ
ಎಲ್ಲ ಧರ್ಮ, ಸಮುದಾಯದವರೂ ಸಹ ಪರಸ್ಪರ ಸಹಕಾರ ನೀಡುವಂತೆ ಡಿವೈಎಸ್‌ಪಿ ರವಿಪ್ರಸಾದ್ ಮನವಿ ಮಾಡಿದರು.
ಪಟ್ಟಣ ಠಾಣೆಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಅವರು ೨೦೧೮ರ ನಂತರ ನಡೆಯುತ್ತಿರುವ ಮೊದಲ ಈದ್-ಮಿಲಾದ್ ಮೆರವಣಿಗೆಗೆ ಪ್ರಮುಖ ರಸ್ತೆಗಳು ಸೇರಿದಂತೆ ಬಜಾರ್ ರಸ್ತೆಯಲ್ಲೂ ಅವಕಾಶ ನೀಡಲಾಗಿದೆ. ಮೆರವಣಿಗೆ ಹೊರಡುವ ವೇಳೆ ಎಲ್ಲಧರ್ಮದ ಮುಖಂಡರು, ಹಿಂದೂಪರ ಸಂಘಟನೆಗಳವರು ಶುಭಕೋರುವ ಮೂಲಕ ಸೌಹಾರ್ದತೆ ಕಾಪಾಡುವಂತೆ ಕೋರಿದರು.
ಬಾವುಟ-ಬಂಟಿಕ್ಸ್ ಬಗ್ಗೆ ಎಚ್ಚರ:
ಮೆರವಣಿಗೆಯು ಮದ್ಯಾಹ್ನ ೨ರಿಂದ ೫ಗಂಟೆಯೊಳಗೆ ಹಾಗೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ರಾತ್ರಿ ೯ರೊಳಗೆ ಮುಕ್ತಾಯಗೊಳಿಸಬೇಕು. ಬೇಕಾಬಿಟ್ಟಿಯಾಗಿ ಬಾವುಟ, ಫ್ಲೆಕ್ಸ್ ಕಟ್ಟುವಂತಿಲ್ಲ, ಬಾವುಟವನ್ನು ಬೈಕ್‌ಗಳಿಗೆ ಕಟ್ಟುವಂತಿಲ್ಲ. ಕೈಯಲ್ಲಿ ಹಿಡಿದು ತಿರುಗಿಸುವಂತಿಲ್ಲ. ತಾಲೂಕು ಹೊರತುಪಡಿಸಿ ಬೇರೆಡೆಯಿಂದ ಯಾರೂ ಬರುವಂತಿಲ್ಲ. ಯುವಕರನ್ನು ಮುಖಂಡರೇ ನಿಯಂತ್ರಿಸಬೇಕು. ಏನೇ ಸಮಸ್ಯೆ ಇದ್ದರೂ ಪೊಲೀಸರ ಗಮನಕ್ಕೆ ತರಬೇಕೆ ಹೊರತು ಅಶಾಂತಿಗೆ ಕಾರಣವಾಗಬಾರದು, ಮೊಬೈಲ್ ಮೂಲಕ ಗಾಳಿ ಸುದ್ದಿ ಹರಡದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ ಅವರು ತಾಲೂಕಿನ ಅಜಾದ್‌ನಗರದವರು ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ, ಅವರೂ ಸಹ ಹುಣಸೂರಿನಲ್ಲೇ ಮೆರವಣಿಗೆಯಲ್ಲಿ ಭಾಗವಹಿಸಬಹುದೆಂದು ಸ್ಪಷ್ಟಪಡಿಸಿದರು.
ನಗರ ವೀಕ್ಷಣೆ:
ನಗರದಲ್ಲಿ ಮೆರವಣಿಗೆ ಹಾದು ಹೋಗುವ ಮಾರ್ಗ, ಶಬ್ಬೀರ್‌ನಗರ ಮತ್ತಿತರ ಕಡೆಗಳಿಗೆ ಎಸ್.ಪಿ.ಚೇತನ್ ಭೇಟಿ ನೀಡಿ ಪರಿಶೀಲಿಸಿದರು.
ಸಭೆಯಲ್ಲಿ ಮಿಲಾದ್ ಸಮಿತಿ ಅಧ್ಯಕ್ಷ ಸರದಾರ್, ನಗರಸಭಾ ಸದಸ್ಯ ಮಾಲಿಕ್‌ಪಾಷಾ, ಸೈಯದ್‌ಯೂನಸ್, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಶ್ರೀರಾಮಸೇನೆ ಅಧ್ಯಕ್ಷ ಅನಿಲ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಮುಖಂಡರಾದ ರಾಘು, ಮಜಾಜ್‌ಅಹಮದ್, ನಿಂಗರಾಜಮಲ್ಲಾಡಿ, ಬಸವಲಿಂಗಯ್ಯ, ಡಿ.ಕುಮಾರ್ ಮತ್ತಿತರರು ಮಾತನಾಡಿ ಶಾಂತಿ ಸೌಹಾರ್ದತೆಗೆ ಕಾಪಾಡುವುದು ಎಲ್ಲರ ಹೊಣೆಯಾಗಿದ್ದು, ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ಇತ್ತು. ಕಿಡಿಗೇಡಿಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇನ್ಸ್ಪೆಕ್ಟರ್ ಶ್ರೀನಿವಾಸ್, ಎಸ್.ಐ.ಪಂಚಾಕ್ಷರಿ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!