ಕುಶಾಲನಗರ, ಮೇ 26: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪಸ್ವಾಮಿ ದೇವಾಲಯ ಬಳಿ ಸುಸಜ್ಜಿತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ದೇವಾಲಯ ಬಳಿಯ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿ ನಿಂತಿದೆ. ಸಾಂಕ್ರಾಮಿಕ ರೋಗ ಹರಡುವ ಎಲ್ಲಾ ಲಕ್ಷಣಗಳಿವೆ. ದೇವಾಲಯಕ್ಕೆ ಆಗ್ರಮಿಸುವ ಭಕ್ತರಿಗೂ ಸೇರಿದಂತೆ ಸ್ಥಳೀಯ ನಿವಾಸಿಗಳಿಗೆ ದುರ್ವಾಸನೆಯಿಂದ ತೀವ್ರ ಅನಾನುಕೂಲ ಉಂಟಾಗಿದೆ. ಈ ಬಗ್ಗೆ ಈ ಹಿಂದೆ ಹಲವು ಬಾರಿ ಪುರಸಭೆ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಮುಂದಿನ ಎರಡು ತಿಂಗಳ ಒಳಗಾಗಿ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಮುಖ್ಯಾಧಿಕಾರಿ ಗಿರೀಶ್ ಅವರನ್ನು ಒತ್ತಾಯಿಸಿದರು.
ಪುರಸಭೆ ಮೂಲಕವೇ ಕಾಮಗಾರಿಗೆ 3.12 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮಳೆಗಾಲ ಆರಂಭವಾದಲ್ಲಿ ಸಮಸ್ಯೆ ತೀವ್ರಗೊಳ್ಳುವ ಕಾರಣ ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲು ಆಗ್ರಹಿಸಲಾಯಿತು.
ಈ ಸಂದರ್ಭ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್, ಜಿಲ್ಲಾ ಸಂಚಾಲಕ ಎಂ.ಎಸ್.ಮಣಿಕಂಠ, ಉಪಾಧ್ಯಕ್ಷೆ ಸರಳ ರಾಮಣ್ಣ, ಸಂಘಟನಾ ಕಾರ್ಯದರ್ಶಿ ನಿರ್ಮಲಾ, ಪ್ರಧಾನ ಕಾರ್ಯದರ್ಶಿ ವಿ.ಕೃಷ್ಣ, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಸಂಚಾಲಕ ಡಿ.ವಿ.ಗಣೇಶ್, ಪದಾಧಿಕಾರಿಗಳಾದ ಸುಂದರ್, ಪುಟ್ಟಮ್ಮ, ಕಮಾಲುದ್ದಿನ್, ನಾಗರಾಜ್, ಗಣೇಶ್ ಟಿ.ಪಿ, ರಾಜೇಗೌಡ ಮತ್ತಿತರರು ಇದ್ದರು.
Back to top button
error: Content is protected !!