ನಿಧನ

ವಿಜಯಸಿಂಗ್ ರೊನಾಲ್ಡ್ ಡೇವಿಡ್ ನಿಧನಕ್ಕೆ ಕಂಬನಿ ಮಿಡಿದ ಆದಿವಾಸಿಗಳು: ಅಂತ್ಯಕ್ರಿಯಲ್ಲಿ ನೂರಾರು ಆದಿವಾಸಿಗಳು ಭಾಗಿ

ಕುಶಾಲನಗರ, ಮೇ 18: ಮೇ 16 ರಂದು‌ ನಿಧನರಾದ ಕುಶಾಲನಗರದ ಕಾರ್ಡ್ ಸಂಸ್ಥೆಯ ರೂವಾರಿ
ಆದಿವಾಸಿಗಳ ಹಕ್ಕುಗಳಿಗಾಗಿ ಅವಿರತವಾಗಿ ಶ್ರಮಿಸಿದ ಸಮಾಜ ಸೇವಕ ಕುಶಾಲನಗರದ ವಿಜಯಸಿಂಗ್ ರೊನಾಲ್ಡ್ ಡೇವಿಡ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು.

ಮೃತರ ಅಂತ್ಯಕ್ರಿಯೆಯಲ್ಲಿ ನೂರಾರು‌ ಮಂದಿ ಆದಿವಾಸಿಗಳು ಭಾಗಿಯಾಗಿ ತಮ್ಮ ಮಾರ್ಗದರ್ಶಕನಿಗೆ ಅಂತಿಮ ನಮನ ಸಲ್ಲಿಸಿದ ಪರಿ ವಿಶೇಷವಾಗಿತ್ತು.
ಕೊಡಗು ಮತ್ತು ಮೈಸೂರು ಜಿಲ್ಲೆಯಿಂದ ಆಗಮಿಸಿದ ಆದಿವಾಸಿಗಳು, ಗಿರಿಜನ ಮುಖಂಡರುಗಳು ಮೃತರ ಅಂತಿಮ‌ ದರ್ಶನ ಪಡೆದು ಮೃತದೇಹದ ಮೆರವಣಿಗೆಯಲ್ಲಿ ಘೋಷಣೆಗಳನ್ನು ಮೊಳಗಿಸಿ ಸಾಗಿ‌ಬಂದರು.

ಕಳೆದ 4 ದಶಕಗಳ ಕಾಲ ಆದಿವಾಸಿಗಳ ಮಾರ್ಗದರ್ಶನಕರಾಗಿ, ಹೋರಾಟಗಳನ್ನು ನಡೆಸಿದ ಡೇವಿಡ್ ಅವರ ಅಗಲಿಕೆಯಿಂದ ಆದಿವಾಸಿ ಸಮುದಾಯಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಜೇನು ಕುರುಬರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಟಿ.ರಾಜಪ್ಪ ತಿಳಿಸಿದರು.

ಮೈಸೂರು, ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳನ್ನು ಸಂಘಟಿಸಿ ತಿಳುವಳಿಕೆ ನೀಡಿ ಸರಕಾರದ ಸೌಲಭ್ಯಗಳು, ಹಕ್ಕುಗಳನ್ನು ಪಡೆದುಕೊಳ್ಳಲು ಮಾರ್ಗದರ್ಶನ ಮಾಡಿದಂತೆ ಮಹಾನ್ ಚೇತನ ರಾಯ್ ಡೇವಿಡ್ ಅವರ ಅಗಲಿಕೆ ನಮ್ಮೆಲ್ಲರನ್ನು ಕಂಗೆಡಿಸಿದೆ. ಅಷ್ಟರ ಮಟ್ಟಿಗೆ ಅವರು ಪ್ರಭಾವ ಬೀರಿದ್ದರು ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ತಿಳಿಸಿದರು.

ಇದೇ ಸಂದರ್ಭ ಜೇನು ಕುರುಬರ ಅಭಿವೃದ್ಧಿ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಬಸವಣ್ಣ, ಬುಡಕಟ್ಟು ಕೃಷಿಕರ ಸಂಘದ ಜೆ.ಕೆ.ತಿಮ್ಮ, ಜೆ.ಎಂ.ಸೋಮಯ್ಯ, ಜಯಪ್ಪ ಜೆ.ಟಿ,‌ಕಾಳಿಂಗ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!