ಕುಶಾಲನಗರ, ಮೇ 08: ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷರು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ, ಆದ್ದರಿಂದ ಅವರ ಜಾತಿ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಒತ್ತಾಯಿಸುತ್ತಿರುವವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲೆಯ ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಮುಖಂಡರುಗಳು ಎಚ್ಚರಿಸಿದ್ದಾರೆ.
ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಆರ್.ಅರುಣ್ ರಾವ್ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡುವಂತೆ ಬೆದರಿಕೆ ರೀತಿಯಲ್ಲಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಅಲ್ಲದೆ ಅವರು ಮರಾತ ಜನಾಂಗಕ್ಕೆ ಸೇರಿದವರಲ್ಲ ಎಂದು ಗೊಂದಲ ಸೃಷ್ಠಿಸುತ್ತಿದ್ದಾರೆ. ಈಗಾಗಲೆ ಜಾತಿ ಪ್ರಮಾಣ ಪತ್ರ ರದ್ದತಿಗೆ ಜಿಲ್ಲಾಡಳಿತದ ಆದೇಶದ ವಿರುದ್ದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿದ್ದರೂ ಕೂಡ ರಾಜಕೀಯ ದ್ವೇಷದಿಂದ ಕೆಲವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್.ಅರುಣ್ ರಾವ್, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಗಂಗಾಧರ, ದಿಡ್ಡಳ್ಳಿ ಹಾಡಿಯ ಮುಖಂಡ ಸ್ವಾಮಿ ಆರೋಪಿಸಿದರು.
ಈ ಸಂಬಂಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಶಿರಸ್ತೇದಾರ್ ಮೂಲಕ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಎಸ್.ಆರ್.ಅರುಣ್ ರಾವ್ ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮರಾತ ಜನಾಂಗದವರಾಗಿದ್ದಾರೆ. ಆದರೂ ಕೆಲವರು ಅರುಣ್ ರಾವ್ ಅವರು ಎಸ್.ಟಿ.ಜನಾಂಗಕ್ಕೆ ಸೇರಿಲ್ಲ ಎಂದು ಪದೇ ಪದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸದರಿ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದಾಗ್ಯೂ ಸುಳ್ಳು ಹೇಳಿಕೆ ಮೂಲಕ ಒತ್ತಡ ಹೇರುತ್ತಿರುವವರ ವಿರುದ್ಧ ಹಾಗೂ ಒತ್ತಡಕ್ಕೆ ಒಳಗಾದರೆ ಅಧಿಕಾರಿಗಳ ವಿರುದ್ದ ಕೂಡ ನ್ಯಾಯಾಂಗ ನಿಂದನೆ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಸ್.ಆರ್.ಅರುಣ್ ರಾವ್ ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷೆ ಕಾವೇರಿ, ನಿರ್ದೇಶಕರಾದ ಚಂದ್ರ, ಕಮಲ, ರಾಜು, ಶಾಮ್, ಕಾಳಯ್ಯ, ಆದಿವಾಸಿ ಮುಖಂಡರಾದ ಮಣಿ, ರಾಜಪ್ಪ ಇದ್ದರು.
Back to top button
error: Content is protected !!