ಕುಶಾಲನಗರ, ಜು 12:ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ಹಿನ್ನೆಲೆಯಲ್ಲಿ ಕಾರ್ಕಳ ದಿಂದ ಆಗಮಿಸಿದ ಶಿಲಾಕಲ್ಲುಗಳನ್ನು ಪೂಜಿಸಿ ಬರಮಾಡಿಕೊಳ್ಳಲಾಯಿತು.
ಎರಡು ಲಾರಿಗಳ ಮೂಲಕ ಕುಶಾಲನಗರಕ್ಕೆ ಆಗಮಿಸಿದ ಕೆತ್ತನೆಗೊಂಡ ಶಿಲಾಕಲ್ಲುಗಳಿಗೆ ಪೂಜೆ ಸಲ್ಲಿಸಿ ದೇವಾಲಯ ಟ್ರಸ್ಟ್ ಪ್ರಮುಖರು ಬರಮಾಡಿಕೊಂಡರು. ಬೈಚನಹಳ್ಳಿ ಮಾರಮ್ಮ ದೇವಾಲಯ ಹಾಗೂ ಕುಶಾಲನಗರ ಶ್ರೀಮಹಾಗಣಪತಿ ದೇವಾಲಯದಲ್ಲಿ ದೇವರಿಗೆ ಪೂಜೆ ನೆರವೇರಿಸಿ ಕಲ್ಲುಗಳಿಗೆ ಪೂಜಿಸಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ದೇವಾಲಯ ಜಾಗದಲ್ಲಿ ಶಾಸ್ತ್ರೋಕ್ತವಾಗಿ ಕಲ್ಲುಗಳನ್ನು ಶೇಖರಿಸಲಾಯಿತು.
ಈ ಸಂದರ್ಭ ಮಾತನಾಡಿದ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಿ.ಪಿ.ಗಣಪತಿ, ಕಾವೇರಿ ನದಿ ತಟದಲ್ಲಿರುವ ಪುರಾತನ ಕಾಲದ ದೇವಾಲಯ ಕಳೆದ ಕೆಲವು ವರ್ಷಗಳ ಹಿಂದೆ ಹಲವು ಬಾರಿ ನದಿ ಪ್ರವಾಹಕ್ಕೆ ಒಳಗಾದ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ದೇವಾಲಯ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೆ ಅಡಿಪಾಯ ಕಾರ್ಯಗಳು ಪೂರ್ಣಗೊಂಡಿದ್ದು ಶಿಲೆಗಳ ನಿರ್ಮಾಣಕ್ಕಾಗಿ ಕಲ್ಲುಗಳನ್ನು ಬರಮಾಡಿಕೊಳ್ಳಲಾಗಿದೆ. 2027 ಫೆಬ್ರವರಿ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಸಂಚಾಲಕರೂ ಆದ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್ ಮಾತನಾಡಿ ಅಯ್ಯಪ್ಪಸ್ವಾಮಿ, ಗಣಪತಿ ಹಾಗೂ ಮಹಾಲಕ್ಷ್ಮಿ ದೇವರುಗಳನ್ನು ಒಳಗೊಂಡಿದ್ದ ದೇವಾಲಯವನ್ನು ರೂ 2.5 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಇದರೊಳಗೆ ನಾಗರಕಟ್ಟೆ, ನವಗ್ರಹ ಕಟ್ಟೆ ಒಳಗೊಂಡಂತೆ ಕೇರಳ ಹಾಗೂ ಕರ್ನಾಟಕ ವಾಸ್ತುಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತದೆ. ಮೇ ತಿಂಗಳಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೊಡಗಿನಲ್ಲಿ ಭವ್ಯವಾದ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಸ್ವಾಮಿ ಭಕ್ತರು,
ದಾನಿಗಳು ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಟ್ರಸ್ಟ್ ಸದಸ್ಯರಾದ ಸುಬ್ರಮಣಿ, ಎಚ್.ಎಂ.ಚಂದ್ರು, ಅನಿಲ್, ಡಿ.ಪಿ.ಗಿರೀಶ್, ಶ್ರೀನಿವಾಸರಾವ್, ಎಚ್.ಟಿ.ವಸಂತ, ವಿಮಲ್ ಜೈನ್, ಅರ್ಚಕ ಸೋಮಶೇಖರ್, ಪುರಸಭೆ ಸದಸ್ಯ ಬಿ.ಎಲ್. ಜಗದೀಶ್, ಭಕ್ತರಾದ ಶಿವಕುಮಾರ್, ಮುರಳಿ, ರಾಜೇಶ್, ಮಹೇಶ್, ರಾವಲ್, ಸತೀಶ್ ಮತ್ತಿತರರು ಇದ್ದರು.
Back to top button
error: Content is protected !!