ಕಾರ್ಯಕ್ರಮ

ಜಾನಪದ ಜೀವನ ಕ್ರಮ ಕಲಿಸುತ್ತದೆ : ಡಾ.ಮೈಸೂರು ಉಮೇಶ್

ಕುಶಾಲನಗರ, ಮಾ 13: ನಮ್ಮ ನಾಡಿನ ಸಂಸ್ಕೃತಿ,ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮಗೆ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮೈಸೂರು ಉಮೇಶ್ ಹೇಳಿದರು.

ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ,ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿವಿಧ ಸಂಸ್ಕೃತಿ,ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದಕ್ಕೆ ಹುಟ್ಟು ಸಾವಿಲ್ಲ.ಈ ದಿಸೆಯಲ್ಲಿ ಯುವ ಜನಾಂಗ ಯಾಂತ್ರಿಕ ಜೀವನ ಶೈಲಿಯನ್ನು ಬದಿಗಿಟ್ಟು,ಜಾನಪದ ಶೈಲಿಯ ಬದುಕನ್ನು ‌ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾನಪದಕ್ಕೆ ಅದ್ಬುತವಾದ ಶಕ್ತಿಯಿದೆ.ನಮ್ಮ ಪೂರ್ವಜರು, ಹಿರಿಯರು ಕಟ್ಟಿದ,ಸೃಷ್ಟಿಸಿದ ಮೂಲ ಜಾನಪದ ಸಾಹಿತ್ಯವನ್ನು ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಅಥವಾ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬಹುದ ಎಂಬ ಪ್ರಶ್ನೆ ಮೂಡಿದೆ. ಆದರೆ ತಂತ್ರಜ್ಞಾನ ಸ್ನೇಹಿ ಶಿಕ್ಷಣಕ್ಕೆ ನಾವು ತೆರೆದುಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಜಾನಪದವನ್ನು ‌ಮರೆಯುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ನಮ್ಮ ಪೂರ್ವಜರು ಸೃಷ್ಟಿಸಿದ ಜಾನಪದವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಕೊಡಗಿನ ಸಂಸ್ಕೃತಿ, ಸಾಹಿತ್ಯವನ್ನು ಅರ್ಥಮಾಡಿಕೊಳ್ಳಬೇಕು.ಕೊಡಗು ವೀರಪರಂಪರೆ ಸಂಸ್ಕೃತಿಯ ಜೊತೆಗೆ ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು,ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವುಗಳೇ ಧನ್ಯರು ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಎಲ್ಲ ಕಲೆಗಳಿಗೂ ಜನಪದ‌ ಮೂಲವಾಗಿದ್ದು,ಎಲ್ಲ ಕಲೆಗಳಿಗೂ ಜಾನಪದ ಸಹಕಾರಿ ಎಂದು ಹೇಳಿದರು.ನಮ್ಮ ದೇಶದಲ್ಲಿ ಆಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ.ಜಾನಪದ ಕಲೆ ಜಾಗತೀಕರಣವಾಗಿದ್ದು,ಮಾನವೀಯಮೌಲ್ಯಗಳನ್ನು ಒತ್ತಿ ಹೇಳುತ್ತವೆ ಎಂದರು.
ಕಾಲೇಜಿನ‌ ಪ್ರಭಾರ ಪ್ರಾಂಶುಪಾಲ ಡಾ. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಗೌಡ, ಶಶಿಕಿರಣ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ಇತಿಹಾಸ ಉಪನ್ಯಾಸಕಿ ಶಾಂತಿ,ಪೊನ್ನಂಪೇಟೆ ಜಾನಪದ ಕಲಾವಿದ ಗಿರೀಶ್, ಐ.ಕ್ಯೂ.ಎ.ಸಿ. ಸಮಿತಿ ಸಂಚಾಲಕ ಪುಟ್ಟರಾಜು,
ಸಾಂಸ್ಕೃತಿಕ ಸಮಿತಿ ಸಂಚಾಲಕ ಟಿ..ಸುಧಾಕರ್,ರೆಡ್ ಕ್ರಾಸ್ ಸಮಿತಿ ಸಂಚಾಲಕ ಪಿ.ರಮೇಶ್ಚಂದ್ರ,ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ..ಬಿ.ಕೆ. ಕುಮಾರ್ ಪಾಲ್ಗೊಂಡಿದ್ದರು. ಜಾನಪದ ಉತ್ಸವ ಅಂಗವಾಗಿ ಪುರುಷ ಉಪನ್ಯಾಸಕರು, ವಿದ್ಯಾರ್ಥಿಗಳು ಶಾರ್ಟ್ ಮತ್ತು ಪಂಚೆ ಹಾಗೂ ಮಹಿಳಾ ಉಪನ್ಯಾಸಕರು,ವಿದ್ಯಾರ್ಥಿನಿಯರು ಸೀರೆ ಧರಿಸಿ ಎಲ್ಲರ ಗಮನ ಸೆಳೆದರು.

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮವನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಉದ್ಘಾಟಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!