ಕುಶಾಲನಗರ, ಅ 06: ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ ರಸಲ್ ಪುರ-ಕಬ್ಬಿನಗದ್ದೆ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರ ವ್ಯವಸ್ಥೆಗೆ ಕಂಟಕಪ್ರಾಯವಾಗಿದೆ.
ರಸಲ್ ಪುರ ಬಸವೇಶ್ವರ ದೇವಾಲಯ ಸಮೀಪದ ವರೆಗೆ ರಸ್ತೆ ಸುಸ್ಥಿಯಲ್ಲಿದೆ. ಮುಂದೆ ಸಾಗಿದಂತೆ ೧ ಕಿಮೀ ಉದಕ್ಕೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ಕಿತ್ತುಬಂದಿದೆ. ಅರ್ಧ ಅಡಿಗಳಷ್ಟು ಆಳಕ್ಕೆ ಗುಂಡಿಗಳಾಗಿದ್ದು ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಅಪ್ಪಿತಪ್ಪಿ ವಾಹನ ಗುಂಡಿಗಿಳಿಸಿದರೆ ರಸ್ತೆಗೆ ಉರುಳುವುದು ಖಚಿತ. ನಾಲ್ಕು ಚಕ್ರದ ವಾಹನಗಳು ರಸ್ತೆ ಗುಂಡಿ ತಪ್ಪಿಸಲು ಅಡ್ಡಾದಿಡ್ಡ ವಾಹನ ಚಲಾಯಿಸಬೇಕಿದ್ದು ಇದು ಕೂಡ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಮಳೆ ಸಂದರ್ಭ ನೀರು ನಿಂತಲ್ಲಿ ಗುಂಡಿ ಸರಿಯಾಗಿ ಗಮನಕ್ಕೆ ಬರುವುದಿಲ್ಲ. ಇದು ಮತ್ತಷ್ಟು ಅಪಾಯಕಾರಿ ಪರಿಸ್ಥಿತಿ ಸೃಷ್ಠಿಸುತ್ತದೆ.
ಇದೇ ಮಾದರಿ ಬಾಳೆಗುಂಡಿ ಹಾಡಿಯಿಂದ ಮುಂದಕ್ಕೆ ತ್ಯಾಗತ್ತೂರು ವರೆಗೆ ಕೂಡ ರಸ್ತೆ ಕಿತ್ತು ಬಂದಿದ್ದು ಸಂಬಂಧಿಸಿದವರು ಕನಿಷ್ಠ ಗುಂಡಿ ಮುಚ್ಚಲು ಕ್ರಮ ವಹಿಸುವಂತೆ ಪ್ರಯಾಣಿಕರು, ಸವಾರರು ಆಗ್ರಹಿಸಿದ್ದಾರೆ.
ಒಂದು ವಾರದೊಳಗೆ ರಸ್ತೆಗೆ ತೇಪೆ ಹಚ್ಚದಿದ್ದಲ್ಲಿ ಜನಪ್ರತಿನಿಧಿಗಳು ಗ್ರಾಮಸ್ಥರೊಂದಿಗೆ ರಸ್ತೆ ತಡೆ ನಡೆಸುವುದಾಗಿ ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಎಚ್ಚರಿಸಿದ್ದಾರೆ.
Back to top button
error: Content is protected !!