ಆರೋಪ

ಶೌಚಾಲಯ ತ್ಯಾಜ್ಯ ಕಾವೇರಿ ನದಿಗೆ… ಸಂಘ ಸಂಸ್ಥೆಗಳ ಅಕ್ರೋಷ: ಕಾನೂನು ಕ್ರಮಕ್ಕೆ‌ ಒತ್ತಾಯ

ಕುಶಾಲನಗರ ಜೂ 17:ಕುಶಾಲನಗರದ ಹಲವು ಭಾಗಗಳಿಂದ ಚರಂಡಿ ಮೂಲಕ ತ್ಯಾಜ್ಯ ನೀರು ಕಾವೇರಿ ನದಿ ಸೇರುತ್ತಿದೆ ಎಂದು ಹಲವು ಸಂಘ ಸಂಸ್ಥೆಗಳ ಪ್ರಮುಖರು ಬೇಟಿಯಾಗಿ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ರಾತ್ರಿ ಗಣಪತಿ ದೇವಸ್ಥಾನದ ಬಳಿ ಯಾರೋ ಚರಂಡಿಗೆ ಶೌಚಾಲಯದ ನೀರು ಬಿಟ್ಟ ಕಾರಣ ದುರ್ವಾಸನೆ ಆವರಿಸಿತ್ತು. ಇದೇ ವಿಚಾರವನ್ನು ಸ್ಥಳೀಯ ವ್ಯಾಟ್ಸ್ ಆಪ್ ಗ್ರೂಪ್ ಗಳಲ್ಲಿ ಚರ್ಚೆ ಮಾಡಿ ಬುಧವಾರ ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತ್ತು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಶೌಚಾಲಯದ ನೀರು ಚರಂಡಿ ಮೂಲಕ ಕಾವೇರಿ ನದಿಗೆ ಹರಿಸುವ ಆ ವ್ಯಕ್ತಿಗಳು ಕೂಡ ಅವರ ಮನೆಯಲ್ಲಿ ಅದೇ ನೀರು ಕುಡಿಯಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲವಾ. ಕಾವೇರಿ ನೀರು ಕುಡಿಯುವ ಲಕ್ಷಾಂತರ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಮುಖ್ಯಾಧಿಕಾರಿ ಗಿರೀಶ್ ಮನವಿ ಸ್ವೀಕರಿಸಿ ಮಾತನಾಡಿ, ತಕ್ಷಣವೇ ಸಂಬಂಧಪಟ್ಟವರಿಗೆ ಎಲ್ಲರಿಗೂ ನೋಟಿಸ್ ನೀಡುತ್ತೇವೆ. ಆದರೂ ಎಚ್ಚೆತ್ತುಕೊಳ್ಳದಿದ್ದರೆ ಕೋರ್ಟ್ ಮೂಲಕ ದೊಡ್ಡ ಮಟ್ಟದ ದಂಡ ವಿಧಿಸುತ್ತೇವೆ ಎಂದು ತಿಳಿಸಿದರು. ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ, ಯಾವುದೇ ಲಾಡ್ಜ್ ನವರು ಬಿಡುತ್ತಿದ್ದರೆ ಅವರ ಪರವಾನಗಿ ರದ್ದು ಮಾಡಿ ಎಂದು ಆಗ್ರಹಿಸಿದರು.
ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಕಾವೇರಿ ಮಲಿನವಾಗುತ್ತಿದೆ. ಇದನ್ನು ತಡೆಗಟ್ಟಲು ವಿಫಲವಾದರೆ ನಾವು ಮುಂದೆ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವುದನ್ನು ಚರ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಿವರಾಮೇಗೌಡ್ರು ಕರವೇ ಯ ಬಣದ ಜಿಲ್ಲಾಧ್ಯಕ್ಷ ದಿನೇಶ್ ಮಾತನಾಡಿ, ಯಾವ ಒತ್ತಡಕ್ಕೂ ಮಣಿಯದೆ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹೆಚ್.ಕೆ.ನಟೇಶ್ ಗೌಡ, ಪುರಸಭೆ ಮಾಜಿ ಸದಸ್ಯರಾದ ಎಂ.ಕೆ. ದಿನೇಶ್, ನಾಮ ನಿರ್ದೇಶಿತ ಸದಸ್ಯ ಪ್ರಕಾಶ್, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಕರವೇ ಯ ಆನಂದ್, ಪುರಸಭೆಯ ಆರೋಗ್ಯಾಧಿಕಾರಿ ಉದಯ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!