ಕುಶಾಲನಗರ, ಫೆ 13:ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಹೊರಸೂಸುವ ಧೂಳಿನಿಂದ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯರೂ ಆದ ಉದ್ಯಮಿ ಡಿ.ಎಸ್.ಹರೀಶ್ ಆರೋಪಿಸಿದ್ದಾರೆ.
ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಹರೀಶ್
ಕೈಗಾರಿಕಾ ಕೇಂದ್ರದಲ್ಲಿರುವ ರಾಜ್ ಕಾಫಿ ಘಟಕದ ಹಿಂಭಾಗ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಹೊಂದಿರುವ ಹರೀಶ್ ಅವರ ಫ್ಯಾಕ್ಟರಿಗೆ ಹೊಂದಿಕೊಂಡಂತಿರುವ ಕಾಫಿ ಘಟಕದಿಂದ ಪ್ರತಿನಿತ್ಯ ಕಾಫಿ ಸಂಸ್ಕರಣೆಯಿಂದ ಹೊರಸೂಸುವ ಧೂಳಿನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು, ವ್ಯವಸ್ಥಾಪಕರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಲವು ಬಾರಿ ಸಂಬಂಧಿಸಿದ ಕಾಫಿ ಘಟಕದ ಮಾಲೀಕರಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡುಮಂಗಳೂರು ಗ್ರಾಪಂ ಗೆ ಕೂಡ ದೂರು ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕಿದೆ. ಕೈಗಾರಿಕಾ ಕೇಂದ್ರ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕಿದೆ. ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಉದ್ಯಮ ನಡೆಸುವತ್ತ ಕಾಫಿ ಸಂಸ್ಕರಣಾ ಘಟಕದ ಮಾಲೀಕರು ಜವಬ್ದಾರಿ ತೋರಬೇಕಿದೆ ಎಂದು ಹರೀಶ್ ಅವರು ಆಗ್ರಹಿಸಿದ್ದಾರೆ.